ಅಯೋಧ್ಯೆ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಮಂದಿರವನ್ನು ಭಕ್ತರಿಗೆ ಮುಕ್ತಗೊಳಿಸೋ ದಿನಾಂಕವೂ ನಿಗದಿಯಾಗಿದೆ. ಆದ್ರೆ, ಭವ್ಯ ರಾಮಮಂದಿರ ನಿರ್ಮಾಣ ಆಗಿದ್ದೇಗೆ..? ಭವ್ಯರಾಮಮಂದಿರ ನಿರ್ಮಾಣಕ್ಕೆ ಬಂದಿರೋ ದೇಣಿಗೆ ಎಷ್ಟು..?
ರಾಮಮಂದಿರ.. ಕೋಟ್ಯಾಂತರ ಹಿಂದೂಗಳ ಶತಮಾನಗಳ ಕನಸು. ತಮ್ಮ ಹೃದಯ ಸಿಂಹಾಸನದಲ್ಲಿದ್ದ ಶ್ರೀರಾಮನಿಗೊಂದು ದೇಗುಲದ ಕನವರಿಕೆ. ಮರ್ಯಾದ ಪುರುಷೋತ್ತಮನ ದರ್ಶನಕ್ಕಾಗಿ ದಶಕಗಳ ಕಾಯುವಿಕೆ. ಹಿಂದೂ ಹೃದಯ ಸಾಮ್ರಾಟನ ಭವ್ಯ ಮಂದಿರ, ರಾಮಜನ್ಮಭೂಮಿಯಲ್ಲಿ ಭರದಿಂದ ಸಾಗಿದೆ. ಇನ್ನು ಒಂದೂವರೆ ವರ್ಷದಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆಎತ್ತಲಿದೆ. ಇದೀಗ ಇಲ್ಲಿಯವರೆಗೂ ರಾಮಮಂದಿರ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ ಅನ್ನೋದು ರಿವೀಲ್ ಆಗಿದೆ.
ರಾಮಮಂದಿರ ನಿರ್ಮಾಣಕ್ಕೆ 5 ಸಾವಿರ ಕೋಟಿ ದೇಣಿಗೆ, 4 ಕ್ವಿಂಟಾಲ್ ಚಿನ್ನ, ಬೆಳ್ಳಿ ನೀಡಿರೋ ಶ್ರೀರಾಮನ ಭಕ್ತರು..!!
ಸರಯೂ ನದಿ ತಟದಲ್ಲಿ ತಲೆ ಎತ್ತಲಿರೋ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆಯನ್ನ ಸಂಗ್ರಹಿಸಲಾಗಿತ್ತು. ರಾಮಭಕ್ತರು ತಮ್ಮ ಕನಸು ಈಡೇರುತ್ತಿರುವುದನ್ನು ಕಂಡು ಹಣ, ಚಿನ್ನ, ಬೆಳ್ಳಿ, ಕಲ್ಲು, ಕಬ್ಬಿಣ ಹೀಗೆ ನಾನಾ ರೀತಿಯ ದೇಣಿಗೆಯನ್ನೂ ನೀಡಿದ್ರು. ಅಲ್ಲದೇ ಹಿಂದೂ ಸಂಘಟನೆಗಳು ಶ್ರೀರಾಮನ ವಾಸಸ್ಥಾನಕ್ಕಾಗಿ ಮನೆಮನೆಗೂ ತೆರಳಿ ದೇಣಿಗೆಯನ್ನೂ ಸಂಗ್ರಹಿಸಿದ್ವು. ಇದೀಗ ಮಂದಿರ ನಿರ್ಮಾಣಕ್ಕೆ ಹರಿದುbಬಂದಿರೋ ದೇಣಿಗೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾಮನಿಗೆ ಕೋಟಿ ಕೋಟಿ ದೇಣಿಗೆ..!!
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಇಲ್ಲಿಯವರೆಗೂ 5 ಸಾವಿರ ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. 9 ಲಕ್ಷ ಹಿಂದೂ ಕಾರ್ಯಕರ್ತರ, 175 ಸಾವಿರ ತಂಡಗಳು ಈ ದೇಣಿಗೆಯನ್ನ ಸಂಗ್ರಹಿಸಿವೆ ಎಂದು ತಿಳಿದು ಬಂದಿದೆ. ಈ ಹಿಂದೂ ಕಾರ್ಯಕರ್ತರ ತಂಡಗಳು ಸುಮಾರು 10 ಕೋಟಿ ಮನೆಗಳಿಂದ ಕೋಟಿ ಕೋಟಿ ಹಣ ದೇಣಿಗೆ ಸಂಗ್ರಹಿಸಿವೆ. ಹೀಗಾಗಿ ಶ್ರೀರಾಮಮಂದಿರ ನಿರ್ಮಾಣದ ನಂತರವೂ 3 ಸಾವಿರದ 500 ಕೋಟಿ ರೂಪಾಯಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಬ್ಯಾಂಕ್ ಖಾತೆಗಳಲ್ಲಿ ಜಮೆಯಾಗಿದೆ. ಇದಷ್ಟೆ ಅಲ್ಲದೇ 4 ಕ್ವಿಂಟಾಲ್ ಚಿನ್ನ ಮತ್ತು ಬೆಳ್ಳಿ ಕೂಡಾ ಮಂದಿರಕ್ಕೆ ದೇಣಿಗೆಯಾಗಿ ಹರಿದು ಬಂದಿದೆ.
ಈ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಎಸ್ಬಿಐ ಬ್ಯಾಂಕ್ನಲ್ಲಿ ಭದ್ರವಾಗಿ ಇಡಲಾಗಿದೆ ಅಂತಾ ಶ್ರೀರಾಮ ಜನ್ಮಭೂಮಿ ಟ್ರಸ್ಟ್ನ ಖಜಾಂಚಿ ಗೋವಿಂದ್ ದೇವ್ ಗಿರಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಕೋಟಿ ಕೋಟಿ ಹಿಂದೂಗಳ ಕನಸು ನನಸಾಗೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 2024ರ ಜ.24 ರಂದು ಅಯೋಧ್ಯೆಯ ಶ್ರೀರಾಮ ಮಂದಿರ ಭಕ್ತರಿಗೆ ತೆರೆದುಕೊಳ್ಳಲಿದೆ. ಕೆಲವೇ ತಿಂಗಳುಗಳಲ್ಲಿ ಕೋಟಿ ಕೋಟಿ ಭಕ್ತರಿಗೆ ಭವ್ಯ ಮಂದಿರದ ಗರ್ಭಗುಡಿಯಲ್ಲೇ ಶ್ರೀರಾಮ ದರ್ಶನ ಕೊಡಲಿದ್ದಾನೆ.