ಪುತ್ತೂರು: ರಾಜಸ್ಥಾನದ ಟೈಲರ್ ಕನ್ಹಯ್ಯಾ ಲಾಲ್ ರವರ ಹತ್ಯೆ ಯನ್ನು ಖಂಡಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದಿಂದ ಪುತ್ತೂರು ತಾಲೂಕು ಆಡಳಿತ ಸೌಧ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ, ವಿಶ್ವಹಿಂದೂ ಪರಿಷದ್ ವಿಭಾಗ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಅಲ್ಪಸಂಖ್ಯಾತರ ತುಷ್ಟೀಕರಣ ರೀತಿಯಿಂದಾಗಿ ಬಹುಸಂಖ್ಯಾತರ ಮೇಲೆ ಕೇಸುಗಳಾಗುತ್ತಿವೆ. ರಾಷ್ಟ್ರೀಯ ಪರ ಕೆಲಸ ಮಾಡಿದವರಿಗೆ ನಮ್ಮ ಬೆಂಬಲವಿದೆ. ಆದರೆ ಭಯೋತ್ಪಾದನೆ ಮಾಡುವವರಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ. ರಾಷ್ಟ್ರದ್ರೋಹ, ಧರ್ಮದ್ರೋಹ ಮಾಡಿದವರಿಗೆ ಈ ದೇಶದಲ್ಲಿ ಜಾಗವಿಲ್ಲ ಎಂದ ಅವರು ಶಸ್ತ್ರ ಮತ್ತು ಶಾಸ್ತ್ರವನ್ನು ಯಾವ ರೀತಿ ಆಚರಿಸಬೇಕೆಂದು ಜಗತ್ತಿಗೆ ತೋರಿಸಿಕೊಟ್ಟ ಈ ದೇಶಕ್ಕೆ ಶಸ್ತ್ರ ಹಿಡಿಯಲು ಗೊತ್ತಿದೆ ಎಂದು ಹೇಳಿದರು.
ಈ ಪುಣ್ಯ ಭೂಮಿಯಲ್ಲಿ ಯಾವ ದುಷ್ಟತನಕ್ಕೆ, ರಾಕ್ಷಸಿತನಕ್ಕೆ ಬೆಂಕಿ ಹಾಕಬೇಕೋ ಆಗ ಬೆಂಕಿ ಹಾಕಲಿದ್ದೇವೆ. ನಮಗೂ ಬೆಂಕಿ ಹಾಕಲು ಗೊತ್ತಿದೆ. ರಾಷ್ಟ್ರೀಯತೆಯನ್ನು ಒಪ್ಪಿಕೊಂಡವರು ಮಾತ್ರ ಈ ರಾಷ್ಟ್ರದಲ್ಲಿ ಇರಲಿ. ಭಾರತ ನಾಶ ಪಣ ತೊಡುವವರಿಗೆ ಎಚ್ಚರಿಕೆ ನೀಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜನಾರ್ಧನ್ ಬೆಟ್ಟ, ಹಿಂದೂ ಜಾಗರಣ ವೇದಿಕೆಯ ಮುಖಂಡ, ಅಜಿತ್ ರೈ ಹೊಸಮನೆ ಹಾಗೂ ಮತ್ತಿತರ ಕಾರ್ಯಕರ್ತರು ಉಪಸ್ಥಿತರಿದ್ದರು.