ನವದೆಹಲಿ: ಶತಮಾನದ ಇತಿಹಾವುಳ್ಳ ದೇಶ ರಾಜಧಾನಿಯ ರಾಜಪಥದ ಹೆಸರು ಇಂದಿನಿಂದ ಅಧಿಕೃತವಾಗಿ ಬದಲಾಗಿದೆ. ಮರುನಾಮಕರಣವಾದ ಕರ್ತವ್ಯ ಪಥವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಅಲ್ಲದೇ ಇದಕ್ಕೂ ಮೊದಲು ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಾಗಿರುವ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣ ಗೊಳಿಸಿದರು.
ಮೊದಲ ಐವತ್ತು ವರ್ಷ ಕಿಂಗ್ಸ್ ವೇ ಆಗಿ, ನಂತರದ 60 ವರ್ಷ ರಾಜಪಥವಾಗಿದ್ದ ರಸ್ತೆಗೆ ದಾಸ್ಯದ ಸಂಕೇತದಿಂದ ಮುಕ್ತಿ ಕೊಡಿಸಲಾಗಿದೆ. ಇದು ಎಲ್ಲರಿಗೆ ಕರ್ತವ್ಯವವನ್ನು ನೆನಪಿಸುವ ಕರ್ತವ್ಯ ಪಥವಾಗಿ ಬದಲಾಗಿದೆ.
ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ 3 ಕಿಲೋಮೀಟರ್ ಉದ್ದದ ರಾಜಪಥಕ್ಕೆ ಕರ್ತವ್ಯ ಪಥ ಎಂದು ಪ್ರಧಾನಿ ಮೋದಿ ಇಂದು ಮರುನಾಮಕರಣ ಮಾಡಿದ್ದಾರೆ. ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ಹೊಸ ರೂಪದಲ್ಲಿ ಕರ್ತವ್ಯ ಪಥ ಕಂಗೊಳಿಸುತ್ತಿದೆ.
ಇದೇ ವೇಳೆ, ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿ ಭಾಗವಾಗಿ ಜನವರಿ 23ರಂದು ಇಂಡಿಯಾ ಗೇಟ್ನಲ್ಲಿ ಪ್ರಧಾನಿ ಮೋದಿ, ನೇತಾಜಿ ಹೋಲೋಗ್ರಾಮ್ ಅನಾವರಣ ಮಾಡಿದ್ದರು. ಗುರುವಾರ ಅದೇ ಸ್ಥಳದಲ್ಲಿ ನೇತಾಜಿಯ ಪ್ರತಿಮೆ ಸ್ಥಾಪಿಸಲಾಗಿದೆ.
ನೇತಾಜಿ ಪ್ರತಿಮೆ ವಿಶೇಷತೆ:
28 ಅಡಿ ಎತ್ತರವಿರುವ ನೇತಾಜಿ ಪ್ರತಿಮೆ 65 ಟನ್ ತೂಕದ್ದಾಗಿದೆ. ಆಂಧ್ರಪ್ರದೇಶದ ಕಮ್ಮಂನ ಗ್ರಾನೈಟ್ ಬಳಸಿ ಪ್ರತಿಮೆ ಕೆತ್ತಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಈ ಪ್ರತಿಮೆಯನ್ನು ಕೆತ್ತನೆ ಮಾಡಿದ್ದಾರೆ.