ಮಂಗಳೂರು: ಕುಕ್ಕರ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಇಸ್ಲಾಮಿಕ್ ಪ್ರವಚನಕಾರ ಝಕೀರ್ ನಾಯ್ಕನಿಂದ ಪ್ರಭಾವಿತನಾಗಿದ್ದ ಎಂಬ ಅಂಶ ಬಯಲಾಗಿದೆ.
ಶಾರೀಕ್ ಮೊಬೈಲ್ ಮೂಲಕ ಝಕೀರ್ ನಾಯ್ಕನ ಭಾಷಣಗಳನ್ನು ನಿರಂತರವಾಗಿ ಆಲಿಸುತ್ತಿದ್ದ ಮತ್ತು ಅವುಗಳನ್ನು ಆಯ್ದ ವ್ಯಕ್ತಿಗಳಿಗೆ ಶೇರ್ ಮಾಡಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಟೆಲಿಗ್ರಾಂ, ಸಿಗ್ನಲ್, ವೈರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಅವುಗಳನ್ನು ಶೇರ್ ಮಾಡಿ, ಇತರರನ್ನು ಪ್ರಚೋದಿಸುತ್ತಿದ್ದ ಎನ್ನಲಾಗಿದೆ.
ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಅರಾಫತ್ ಎಂಬಾತನೇ ಶಾರೀಕ್ಗೆ ನಿರ್ದೇಶನ ನೀಡುತ್ತಿದ್ದ ಎನ್ನುವ ಮಾಹಿತಿಯೂ ಈಗ ಹೊರಬಿದ್ದಿದೆ.
ಮೂಲತಃ ತೀರ್ಥಹಳ್ಳಿಯವನೇ ಆಗಿರುವ ಅರಾಫತ್ನ ನಿರ್ದೇಶನದ ಮೇರೆಗೆ ಹಿಂದೆ ಶಾರೀಕ್ ಹಾಗೂ ಮುನೀರ್ ಮಾಝ್ ಮಂಗಳೂರಿನಲ್ಲಿ ಉಗ್ರ ಪರ ಗೋಡೆ ಬರಹ ಬರೆದಿದ್ದರು. ಆ ಪ್ರಕರಣದ ಎಫ್ಐಆರ್ನಲ್ಲಿ ಮೂರನೇ ಆರೋಪಿಯಾಗಿ ಅರಾಫತ್ ಹೆಸರೂ ಇತ್ತು. ಕುಕ್ಕರ್ ಪ್ರಕರಣದಲ್ಲೂ ಆತನ ನೇರ ಮಾರ್ಗದರ್ಶನವಿತ್ತು ಎಂದು ತಿಳಿದು ಬಂದಿದೆ.
ಅರಾಫತ್ ಅಲಿಯ ಹ್ಯಾಂಡ್ಲರ್ ಆಗಿ ಜಾಫರ್ ನವಾಜ್ ಕಾರ್ಯ ನಿರ್ವಹಿಸುತ್ತಿದ್ದ. ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಅರಾಫತ್ ಅಲಿ ನೋಡಿಕೊಳ್ಳುತ್ತಿದ್ದ. ಅರಾಫತ್ ಆಲಿಯೇ ಶಾರೀಕ್ ಮತ್ತು ಮುನೀರ್ ಮಾಝ್ನ ಬ್ರೈನ್ ವಾಶ್ ಮಾಡಿದ್ದ. ಅಲ್ಲದೆ ಇವರಿಬ್ಬರಿಗೆ ಹಣಕಾಸಿನ ವ್ಯವಸ್ಥೆಯನ್ನೂ ಅರಾಫತ್ ಅಲಿ ಮಾಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ನ್ಯಾಯಾಲಯವೂ ಈಗಾಗಲೇ ಲುಕ್ಔಟ್ ನೊಟೀಸ್ ಕೂಡ ಜಾರಿಗೊಳಿಸಲಾಗಿದೆ.
ಮೊಹಮ್ಮದ್ ಶಾರೀಕ್ಗೆ ಸೇರಿದ ಮೊಬೈಲ್ ತಪಾಸಣೆ ವೇಳೆ ಕೆಲವು ಸೆಲ್ಫಿ ಫೋಟೋಗಳು, ಬಾಂಬ್ ತಯಾರಿಯ ವೀಡಿಯೋಗಳು ಹಾಗೂ ಅಶ್ಲೀಲ ವೀಡಿಯೋಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಡಾರ್ಕ್ವೆಬ್ ಬಳಕೆ ಮಾಡಿಕೊಂಡು ಕುಕ್ಕರ್ ಬಾಂಬ್, ಟಿಫಿನ್ ಬಾಂಬ್ ಇತ್ಯಾದಿ ಸುಧಾರಿತ ಸ್ಫೋಟಕಗಳನ್ನು ತಯಾರಿಸುವ ಬಗೆಯನ್ನು ಶಾರೀಕ್ ಅರಿತುಕೊಂಡಿದ್ದ. ಶಾರೀಕ್ 40ಕ್ಕೂ ಅಧಿಕ ಮಂದಿಗೆ ಐಸಿಸ್ ಮೂಲಕ ಉಗ್ರ ತರಬೇತಿ ಕೊಡಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ..