ಬಂಟ್ವಾಳ: ಸರಕಾರಿ ಪ್ರೌಢಶಾಲೆ ಗೋಳ್ತಮಜಲು, ಕಲ್ಲಡ್ಕ ಇದರ ಶಾಲಾ ವಾರ್ಷಿಕೋತ್ಸವವು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಟೈಲರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ತಾಲೂಕು ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು ಮಾತನಾಡಿ, ಸರಕಾರದಿಂದ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಸೌಕರ್ಯಗಳು ಸಿಗುತ್ತಿದ್ದು ಅದನ್ನು ಸರಿಯಾಗಿ ಉಪಯೋಗಿಸಿ ಶಾಲೆಗೆ, ಊರಿಗೆ, ದೇಶಕ್ಕೆ ಒಳ್ಳೆಯ ಹೆಸರು ತನ್ನಿ., ಮನೆ ಮತ್ತು ಶಾಲೆ ನಮಗೆ ಸಂಸ್ಕಾರ ಕಲಿಸುವ ಕೇಂದ್ರಗಳು, ಮೊಬೈಲ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳನ್ನು ಅವಶ್ಯಕತೆಯಷ್ಟೆ ಬಳಸಿರಿ, ದುಶ್ಚಟಗಳಿಗೆ ಬಲಿಯಾಗದಿರಿ, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಅಧ್ಯಾಪಕರಾದ ನಾರಾಯಣ ಗೌಡರು ಮಾತನಾಡಿ, ಶಿಕ್ಷಣಕ್ಕೆ ಸೌಲಭ್ಯಗಳು ದೊರೆತರೂ ಫಲಿತಾಂಶಗಳು ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ.ಆ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಟೈಲರ್ ಮಾತನಾಡಿ, ಊರ ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿಯತ್ತ ಸಾಗುತ್ತಿರುವುದು ಅಭಿನಂದನಾರ್ಹ. ಉತ್ತಮ ಶಿಕ್ಷಕ ವೃಂದದ ಜೊತೆಗೆ ಅಭಿವೃದ್ಧಿ ಸಮಿತಿಯು ಶಾಲಾ ಪ್ರಗತಿಗೆ ಶ್ರಮಿಸುವುದು ಕೂಡ ಸಂತಸದ ವಿಚಾರ. ಇದರಿಂದ ಶಾಲಾ ಫಲಿತಾಂಶದಲ್ಲೂ ಒಳ್ಳೆಯ ಪ್ರಗತಿಯನ್ನು ಸಾಧಿಸುತ್ತದೆ. ಆ ದಿಶೆಯಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ವೇದಿಕೆಯಲ್ಲಿ ಗೋಳ್ತಮಜಲು ಗ್ರಾ.ಪಂ.ಮಾಜಿ ಅಧ್ಯಕ್ಷ ಮೋನಪ್ಪ ದೇವಸ್ಯ, ಗ್ರಾ.ಪ.ಸದಸ್ಯರಾದ ಪುರುಷೋತ್ತಮ, ಸರೋಜಿನಿ ಶೆಟ್ಟಿ, ನಳಿನಿ, ಶಾಲಾ ಮುಖ್ಯೋಪಾಧ್ಯಾಯರಾದ ವಿದ್ಯಾಲತಾ, ಶಾಲಾ ವಿದ್ಯಾರ್ಥಿ ನಾಯಕಿ ಫಾತಿಮತ್ ಶೈಮ ಉಪಸ್ಥಿತರಿದ್ದರು.
ಶೈಕ್ಷಣಿಕ ವರ್ಷದ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಾಲಾಭಿವೃದ್ದಿಗೆ ಕೈ ಜೋಡಿಸಿದ ದಾನಿಗಳಿಗೆ ಅಭಿನಂದನಾಪತ್ರ ನೀಡಿ ಗೌರವಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಧ್ಯಾಪಕರಾದ ಸತ್ಯಶಂಕರ್ ಬಿ.ಸ್ವಾಗತಿಸಿ, ಚಿದಾನಂದ್ ವಂದಿಸಿದರು. ಶಂಕರ್ ವೆಂಕಪ್ಪ ಸಾವಸ್ಕರ್ ಕಾರ್ಯಕ್ರಮ ನಿರೂಪಿಸಿದರು.