ಬೆಳ್ತಂಗಡಿ: ತಾಲೂಕು ಕಡಿರುದ್ಯಾವರ ಗ್ರಾಮದ ಎರ್ಮಳಪಲ್ಕೆ ಮಠ ಎಂಬಲ್ಲಿ 2021ರ ಡಿ.19 ರಂದು ಎರ್ಮಳಪಲ್ಕೆ ಕೊಂಬರೋಡಿ ಬಾಬಿ (48) ಎಂಬಾತ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ನ್ಯಾಯಲಯವು ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.
ನೊಂದ ಬಾಲಕಿ ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ಠಾಣಾ ಅಕ್ರ:15/2022 ಕಲಂ: 4 & 6 ಫೋಕ್ಸೋ ಕಾಯ್ದೆ & 376 ಐಪಿಸಿ ಯಂತೆ ಬೆಳ್ತಂಗಡಿ ಠಾಣಾ ಪಿ.ಎಸ್.ಐ ನಂದಕುಮಾರ್ ರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬಳಿಕ ಈ ಪ್ರಕರಣದಲ್ಲಿ, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ಆರೋಪಿ ಬಾಬಿ (48) ಎಂಬಾತನನ್ನು ಬಂಧಿಸಿ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಆರೋಪಿತನ ಆರೋಪ ಸಾಬೀತಾಗಿರುತ್ತದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ -2 (ಫೋಕ್ಸೋ) ಇದರ ನ್ಯಾಯಾಧೀಶರಾದ ರಾಧಾಕೃಷ್ಣ ರವರು ಜ.24 ರಂದು ಅಪರಾಧಿಗೆ 20 ವರ್ಷಗಳ ಕಾರಾಗೃಹ ಹಾಗೂ 50 ಸಾವಿರ ರೂಪಾಯಿ ದಂಡ, ದಂಡಕಟ್ಟಲು ತಪ್ಪಿದಲ್ಲಿ, 6 ತಿಂಗಳ ಕಠಿಣ ಕಾರಾಗೃಹ ವಾಸ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆ, ಐ ಪಿ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಮತ್ತು ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ಥೋರಾಟ್ ರವರ ನಿರ್ದೇಶನದಂತೆ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರು ತನಿಖೆಯನ್ನು ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದು, ಪ್ರಕರಣದಲ್ಲಿ ತನಿಖಾ ಸಹಾಯಕರಾಗಿ ಹೆಡ್ ಕಾನ್ಸ್ಟೇಬಲ್ ವಿಜಯಕುಮಾರ್ ರೈ ರವರು ಕಾರ್ಯನಿರ್ವಹಿಸಿದ್ದು, ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟ್ರಮಣ ಸ್ವಾಮಿ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ..