ಮಂಗಳೂರು: ಕೊರೊನಾ ಬಳಿಕ ಮೊಬೈಲ್, ಟಿವಿ ಹುಚ್ಚು ಮಕ್ಕಳನ್ನು ತೀವ್ರವಾಗಿ ಕಾಡತೊಡಗಿದೆ. ಇದೇ ಕಾರಣಕ್ಕೆ ಮಕ್ಕಳು ತಾಳ್ಮೆ ಕಳೆದುಕೊಂಡು ದುರಂತ ತಂದುಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಅಂತಹದ್ದೇ ಘಟನೆ ನಡೆದಿದ್ದು, ಬಾಲಕನೊಬ್ಬ ಒಂದು ಕ್ಷಣದ ಎಡವಟ್ಟಿನಲ್ಲಿ ಬಾರದ ಲೋಕಕ್ಕೆ ಹೋಗಿದ್ದಾನೆ.
ಮನೆಯಲ್ಲಿ ಮೊಬೈಲ್ ನೋಡಲು ಬಿಟ್ಟಿಲ್ಲವೆಂದು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳೂರು ನಗರದ ಕುಲಶೇಖರದ ನಿವಾಸಿ ಜಗದೀಶ್ ಹಾಗೂ ವಿನಯಾ ದಂಪತಿಯ ಪುತ್ರ ಜ್ಞಾನೇಶ್, ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಾವಾಗಲೂ ಮೊಬೈಲ್ ನೋಡುತ್ತಾನೆಂದು ತಾಯಿ ಮಗನನ್ನು ಬೈದಿದ್ದು, ಇದರಿಂದ ಖಿನ್ನನಾಗಿದ್ದ ಬಾಲಕ ತಾಯಿ ಎದುರಲ್ಲೇ ಮನೆಯ ಕೋಣೆಗೆ ತೆರಳಿದ್ದ. ಮಗ ಸ್ನಾನಕ್ಕೆ ಹೋಗಿದ್ದಾನೆಂದು ಮನೆಯವರು ತಮ್ಮ ಪಾಡಿಗೆ ಇದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಕಿಟಕಿಯಲ್ಲಿ ನೋಡಿದರೆ, ಬಾಲಕ ಫ್ಯಾನಿಗೆ ಶಾಲು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಶಾಲು ಬಿಚ್ಚಲಾಯಿತಾದರೂ ಆದಾಗಲೇ ಬಾಲಕ ಬಾರದ ಲೋಕಕ್ಕೆ ಹೋಗಿದ್ದ. ಒಂದು ಕ್ಷಣದ ಸಿಟ್ಟು, ಆವೇಶಕ್ಕೆ ಬಾಲಕ ತನ್ನ ಜೀವನವನ್ನೇ ಕೊನೆಗೊಳಿಸಿದ್ದಾನೆ.
ಕುಲಶೇಖರದ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಜ್ಞಾನೇಶ್ ಕಲಿಯುವುದರಲ್ಲೂ ಮುಂದಿದ್ದ. ಆದರೇ ಮೊಬೈಲ್, ಟಿವಿಯ ಹುಚ್ಚಿನ ಜೊತೆಗೆ ತುಂಟಾಟವೂ ಹೆಚ್ಚಿತ್ತು. ಆಟವಾಡಿಕೊಂಡಿರುತ್ತಿದ್ದ ಬಾಲಕ ದಿಢೀರ್ ಎಂದು ಕಣ್ಮರೆಯಾಗಿರುವುದು ಶಾಲೆಯ ಮಕ್ಕಳನ್ನೂ ಕಣ್ಣೀರ ಕಡಲಲ್ಲಿ ಮುಳುಗಿಸಿದೆ..