ಪುತ್ತೂರು: ಕಾರಿನಲ್ಲಿ ಮಹಿಳೆಯೋರ್ವರನ್ನು ಕರೆದೊಯ್ದ ವಿಚಾರವಾಗಿ ನನ್ನ ವಿರುದ್ಧ ಮಾಡಲಾಗಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜಕೀಯವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದವರನ್ನು ಪಣೋಲಿಬೈಲು ಸತ್ಯದೇವತೆ ನೋಡಿಕೊಳ್ಳಲಿ ಎಂದು ಬಿಜೆಪಿ ಮುಖಂಡ, ಕೇಪು ಮುಳಿಯಾಲದ ಹರಿಪ್ರಸಾದ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಜ.31 ರಂದು ಸ್ವಜಾತಿಯ ಹಾಗೂ ನನ್ನ ಪರಿಚಯದ ಮಹಿಳೆಯು ಕನ್ಯಾನ ಗ್ರಾಮದ ಧಾರ್ಮಿಕ ಕಾರ್ಯಕ್ರಮ ಕ್ಷೇತ್ರದಿಂದ ಸಂಜೆ ದೂರವಾಣಿ ಕರೆ ಮಾಡಿ ‘ನಾನು ಬೆಳಿಗ್ಗೆ ನಮ್ಮ ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಕಾರಿನಲ್ಲಿ ಕ್ಷೇತ್ರಕ್ಕೆ ಬಂದಿರುವುದಾಗಿಯೂ, ಈವಾಗ ಅವರು ಹೊರಡುವಾಗ ತಡವಾಗುವುದರಿಂದ ನನ್ನ ಮಗಳ ಶಾಲೆ ಬಿಡುವ ಸಮಯಕ್ಕೆ ನನಗೆ ಸುಳ್ಯಕ್ಕೆ ತಲುಪಬೇಕಾಗಿರುವುದರಿಂದ ನಿಮ್ಮ ಕಾರಿನಲ್ಲಿ ನನ್ನನ್ನು ಮತ್ತು
ನನ್ನ ಇಬ್ಬರು ಮಹಿಳಾ ಸಹೋದ್ಯೋಗಿಗಳನ್ನು ಬಿಡಬಹುದೇ’ ಎಂದು ಕೇಳಿದ್ದು, ಆಗ ನಾನು ಪಕ್ಷದ ಸಭೆಯಲ್ಲಿ ಇರುವುದರಿಂದ ನನಗೀಗ ಬರಲಿಕ್ಕೆ ಆಗುವುದಿಲ್ಲ. ಅನಿವಾರ್ಯವಾದರೆ ನನ್ನ ಕಾರಿನ ಚಾಲಕ ಜಯರಾಮನಲ್ಲಿ ಕಾರು ಕೊಟ್ಟು ಕಳುಹಿಸುತ್ತೇನೆ ಎಂದು ಹೇಳಿ ನನ್ನ ಚಾಲಕನಲ್ಲಿ ಕಾರು ಕೊಟ್ಟು ಕಳುಹಿಸಿ ಕೊಟ್ಟಿರುತ್ತೇನೆ.
ಸಂಜೆ ವೇಳೆ ಚಾಲಕ ಜಯರಾಮ ನನಗೆ ಕರೆ ಮಾಡಿ ಬೈಕಲ್ಲಿ ಬಂದ ಒಬ್ಬ ವ್ಯಕ್ತಿ ಕಾರಿಗೆ ಅಡ್ಡ ಕಟ್ಟಿ ಕಾರಿನ ಕೀ ಕಸಿದುಕೊಂಡು ಹೆಣ್ಣು ಮಗಳನ್ನು ಕಾರಿನಿಂದ ಎಳೆದು ಹಾಕಿ ಹೊಡೆಯುತ್ತಾ ಇದ್ದಾನೆ ಎಂದು ಹೇಳಿದ್ದಾನೆ. ಮತ್ತೆ ನನ್ನ ಚಾಲಕ ಅದು ಮಹಿಳೆಯ ಗಂಡ ಸುಧೀರ್ ಎಂದು ತಿಳಿಸಿರುತ್ತಾನೆ ಮತ್ತು ಸ್ಥಳಕ್ಕೆ ಪೊಲೀಸ್ ಬಂದಾಗ ಅಲ್ಲಿಂದ ಕಾರಿನ ಕೀಯ ಜೊತೆಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಚಾಲಕ ಹೇಳಿದ್ದು, ಕೂಡಲೇ ನಾನು ಪಕ್ಷದ ಸಭೆಯಿಂದ ಮನೆಗೆ ಬಂದು ಕಾರಿನ ಇನ್ನೊಂದು ಕೀಯನ್ನು ಹಿಡ್ಕೊಂಡು ಪುತ್ತೂರಿನಿಂದ ಘಟನೆ ನಡೆದ ಸ್ಥಳ ಜಾಲ್ಸೂರಿನಿಂದ ನೂರು ಮೀಟರ್ ದೂರ ನನ್ನ ಕಾರಿನ ಹತ್ತಿರ ತೆರಳಿ ಅಲ್ಲೇ ಇದ್ದ ನನ್ನ ಚಾಲಕನೊಂದಿಗೆ ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ಕೊಟ್ಟು ಬಂದಿರುತ್ತೇನೆ. ಆದರೆ ಘಟನೆಯನ್ನು ನಾನೇ ಮಹಿಳೆಯೊಬ್ಬರನ್ನು ಕರೆದೊಯ್ದಿರುವುದಾಗಿ ಅಪಪ್ರಚಾರ ಮಾಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.
ನನ್ನ ಬಗ್ಗೆ ಅಪಪ್ರಚಾರ ಮತ್ತು ನನ್ನ ತೇಜೋವಧೆಯ ಷಡ್ಯಂತ್ರ ಮಾಡಿರುವ ಬಗ್ಗೆ ಫೆ.2 ರಂದು ಪಣೋಲಿಬೈಲು ಸತ್ಯದೇವತೆಯ ನಡೆಗೆ ತೆರಳಿ, ನಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲವೆಂದು ಸತ್ಯದ ವಿಚಾರ ಹೇಳಿ ಬಂದಿದ್ದೇನೆ. ನನ್ನ ಬಗ್ಗೆ ಈ ರೀತಿ ಸುಳ್ಳು ಆರೋಪ ಮಾಡಿದವರನ್ನು ಆ ತಾಯಿಯೇ ನೋಡಿಕೊಳ್ಳುತ್ತಾಳೆ.
ನಾನು ಕಳೆದ 20 ವರ್ಷದಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಬೂತ್ ಅಧ್ಯಕ್ಷನಿಂದ ಹಿಡಿದು ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿ ಪಕ್ಷದ ಬಲವರ್ಧನೆಗೆ ನನ್ನ ಸಹಕಾರವನ್ನು ನೀಡಿರುತ್ತೇನೆ. ಮುಂದೆಯೂ ಪಕ್ಷದಲ್ಲಿ ಸಕ್ರಿಯವಾಗಿ ಇರುತ್ತೇನೆ, ನಡೆದ ಘಟನೆಯನ್ನು ಜಿಲ್ಲಾಧ್ಯಕ್ಷರಿಗೆ, ಶಾಸಕರಿಗೆ ಮಂಡಲ ಅಧ್ಯಕ್ಷರಿಗೆ ವಿವರಿಸಿದ್ದೇನೆ ಎಂದು ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.
ಜ.31ರಂದು ಸಂಜೆ ಹರಿಪ್ರಸಾದ್ ಅವರು ನನ್ನಲ್ಲಿ ಕನ್ಯಾನ ಸಮೀಪದ ಧಾರ್ಮಿಕ ಕ್ಷೇತ್ರದಿಂದ ಒಬ್ಬರು ನನ್ನಸ್ವಜಾತಿಯವಳು ಹಾಗೂ ಇಬ್ಬರು ಅವಳ ಸಹೋದ್ಯೋಗಿಗಳನ್ನುಕರೆದುಕೊಂಡು ಅವರು ಎಲ್ಲಿ ಹೇಳ್ತಾರೆ ಅಲ್ಲಿ ಬಿಟ್ಟು ಬಾ ಎಂದು ಹೇಳಿ ಕಳುಹಿಸಿರುತ್ತಾರೆ. ಅದರಂತೆ ನಾನು, ಇಬ್ಬರು ಸಹೋದ್ಯೋಗಿಗಳು ಅವರವರ ಜಾಗದಲ್ಲಿ ಇಳಿದ ಮೇಲೆ ಸ್ವಲ್ಪ ದೂರ ಸಾಗಿದ ಮೇಲೆ ಈ ಘಟನೆ ನಡೆದಿದೆ. ಆದರೆ ಹರಿಪ್ರಸಾದ್ ಯಾದವರು ಕಾರಿನಲ್ಲಿ ಇರಲಿಲ್ಲ ಎಂದು ಕಾರು ಚಾಲಕ ಜಯರಾಮ ಅವರು ತಿಳಿಸಿದ್ದಾರೆ.