ವಿಟ್ಲದ ಅಡ್ಯನಡ್ಕದಲ್ಲಿ ಶೈಕ್ಷಣಿಕ ಕಾರ್ಯಾಗಾರದಲ್ಲಿ ಇಸ್ಲಾಂ ಮತ ಪ್ರವಚನ ಮಾಡುತ್ತಿದ್ದಾರೆಂದು ಹಿಂದೂ ಸಂಘಟನೆ ದಾಳಿ ನಡೆಸಿದ ವಿಚಾರವನ್ನು ಉಳ್ಳಾಲ ಶಾಸಕರಾದ ಯುಟಿ ಖಾದರ್ ರವರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಂಜೀವ ಮಠಂದೂರು ರವರು ಪ್ರತಿಕ್ರಿಯಿಸಿದ್ದಾರೆ.
‘ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹಿಂದೂಗಳ ಪವಿತ್ರ ಹಬ್ಬವಾದ ಶಿವರಾತ್ರಿಯಂದು ಆ ಶಾಲೆಯ ಮುಖ್ಯೋಪಾಧ್ಯಯರು ಕರೆಸಿ ಪರೀಕ್ಷಾ ಕೋಚಿಂಗ್ ನೀಡುತ್ತಾರೆಂದು ತಿಳಿಸಿ, ಶಾಲೆಯಲ್ಲಿ ಯಾವುದೇ ತರಗತಿಗಳನ್ನು ತೆಗೆದುಕೊಳ್ಳದೆ ಅವರನ್ನು ಶಾಲೆಯಿಂದ ದೂರದಲ್ಲಿರುವ ಕಟ್ಟಡದಲ್ಲಿ ಇಸ್ಲಾಂ ಸಂಘಟಕರೊಂದಿಗೆ ಮಕ್ಕಳಿಗೆ ಪರೀಕ್ಷೆಯ ಕೋಚಿಂಗ್ ನೀಡುವ ನೆಪದಲ್ಲಿ ಪ್ರವಾದಿಗಳ ಪ್ರವಚನವನ್ನು ನೀಡಿದ್ದು, ಈ ವಿಚಾರವನ್ನು ಮಕ್ಕಳೇ ಸ್ವತಃ ತಿಳಿಸಿರುತ್ತಾರೆ.
ಇದರ ಸತ್ಯಾಸತ್ಯತೆಯನ್ನು ತಿಳಿಯದೆ ಉಳ್ಳಾಲ ಶಾಸಕರು ಸದನದಲ್ಲಿ ಪ್ರಸ್ತಾಪಿಸಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಸರಿಯಾದ ವಿಷಯವನ್ನು ತಿಳಿಯದೆ ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿರುವುದಕ್ಕೆ ನನ್ನ ಆಕ್ಷೇಪವಿದೆ.
ಅಡ್ಯನಡ್ಕದಲ್ಲಿ ಹಿಂದೂ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಒಂದು ಧಾರ್ಮಿಕ ಸಂಘಟನೆಯ ವ್ಯಕ್ತಿಯ ಮೂಲಕ ಮತ ಪ್ರವಚನವನ್ನು ಮಾಡಿ ಮಕ್ಕಳ ಮನಸ್ಸಿಗೆ ನೋವನ್ನುಂಟು ಮಾಡುವ ಕೆಲಸವನ್ನು ಮಾಡಿರುತ್ತಾರೆ.
ಇದರ ಬಗ್ಗೆ ಈಗಾಗಲೇ ನಾನು ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಮಾತನಾಡಿ ಸಂಘಟಕರ ವಿರುದ್ಧ ಹಾಗೂ ವಿದ್ಯಾರ್ಥಿಗಳನ್ನು ಅಲ್ಲಿಗೆ ಕಳುಹಿಸಿದ ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ.
ಘಟನೆಯ ಸತ್ಯಾಅಸತ್ಯತೆಯ ವಿಚಾರವನ್ನು ನಾನು ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಪಕ್ಷದ ಪ್ರಮುಖರೊಂದಿಗೆ ಮಾತನಾಡಿ ತಿಳಿದುಕೊಂಡಿದ್ದೇನೆ. ವಿಷಯ ಗೊತ್ತಿಲ್ಲದೆ ಉಳ್ಳಾಲ ಶಾಸಕರು ಹಿಂದೂ ಸಂಘಟನೆಯವರ ಮೇಲೆ ಮತ್ತು ಪ್ರಮುಖರ ಮೇಲೆ ಆರೋಪ ಮಾಡಿರುವುದರಲ್ಲಿ ನಿಜಾಂಶವಿಲ್ಲ.. ಆ ಭಾಗದ ಶಾಸಕನಾಗಿ ನಾನು ಯಾವತ್ತು ಕೂಡ ಹಿಂದೂ ಸಂಘಟನೆಯ ಕಾರ್ಯಕರ್ತರೊಂದಿಗೆ ಸದಾ ಇರುತ್ತೇನೆಂದು’ ಅವರು ತಿಳಿಸಿದ್ದಾರೆ..