ಪುತ್ತೂರು: ದೇವರ ಭೂಮಿ ಅಂತಲೇ ಖ್ಯಾತಿ ಹೊಂದಿರೋ ಕಡಲತಡಿಯಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಬಲ ಯಾಗವೊಂದು ನಡೆದಿದೆ.. ಪುತ್ತೂರಿನಲ್ಲಿ 14 ದಿನಗಳ ಕಾಲ ನಡೆದ ಅತಿರುದ್ರ ಮಹಾಯಾಗ ನಿನ್ನೆ ಸಂಪನ್ನಗೊಂಡಿದೆ.
ದೇವರ ಭೂಮಿ ಅಂತಲೇ ಪ್ರಸಿದ್ದಿ ಪಡೆದಿರೋ ರಾಜ್ಯದ ಕರಾವಳಿ ಭಾಗ ಶಕ್ತಿ ದೇವತೆಗಳ ವಾಸ ಸ್ಥಾನ. ದೈವ ಹಾಗೂ ದೇವರ ಮೇಲೆ ಅಘಾದವಾದ ನಂಬಿಕೆ ಹೊಂದಿರೋ ಕಡಲ ತಡಿ ಜನತೆ ವಿಶೇಷ ಹಾಗೂ ವಿಭಿನ್ನವಾದ ಆಚರಣೆಗಳ ಮೂಲಕ ದೇವರಿಗೆ ಭಕ್ತಿ ಸಮರ್ಪಣೆ ಮಾಡ್ತಾರೆ. ಇದೇ ರೀತಿ ಲೋಕ ಕಲ್ಯಾಣಕ್ಕಾಗಿ ಪುತ್ತೂರಿನಲ್ಲಿ ಪ್ರಪಥಮ ಬಾರಿಗೆ ಮಹಾಯಾಗವೊಂದು ನಡೆದಿದೆ.
ಲೋಕ ಕಲ್ಯಾಣಕ್ಕಾಗಿ ಪುತ್ತೂರಿನಲ್ಲಿ ಅತಿರುದ್ರ ಮಹಾಯಾಗ..:
ನಾಗಮಂಡಲ, ಸಹಸ್ರ ನಾಳಿಕೇರ, ತ್ರಿ ಮಧುರ ಹವನ, ರಕ್ತೇಶ್ವರಿ ನಡಾವಳಿ, ಲಕ್ಷ ಗಾಯತ್ರಿ ಯಜ್ಞದಿಂದ ಪ್ರಸಿದ್ದಿ ಪಡೆದಿದ್ದ ಪುತ್ತೂರಿನ ಸಂಪ್ಯ ಉದಯಗಿರಿ ಕ್ಷೇತ್ರ ಈಗ ಅತಿರುದ್ರ ಮಹಾಯಾಗಕ್ಕೂ ಸಾಕ್ಷಿಯಾಗಿದೆ.
ಶ್ರೀ ವಿಷ್ಣುಮೂರ್ತಿ ಹಾಗೂ ಅನ್ನಪೂರ್ಣೇಶ್ವರಿಯ ಕ್ಷೇತ್ರವಾಗಿರೋ ಉದಯಗಿರಿಯಲ್ಲಿ ನಡೆದ ಈ ಯಾಗ ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಡೆದ ಅತಿರುದ್ರ ಮಹಾಯಾಗ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಪರಮೇಶ್ವರನ ಯಜ್ಞಗಳಲ್ಲಿ ಅತ್ಯಂತ ಶ್ರೇಷ್ಠವಾಗಿ ಪುಣ್ಯ ಫಲ ಪ್ರಾಪ್ತವಾಗುವ ಯಾಗ ಇದಾಗಿದ್ದು, ಮಾರ್ಚ್ 5 ರಿಂದ 14 ದಿನಗಳ ಕಾಲ ಯಾಗ ನಡೆದು ನಿನ್ನೆ ಯಾಗ ಸಂಪನ್ನಗೊಂಡಿದೆ.
12 ಮಂದಿ ಋತ್ವಿಜರು,135 ಮಂದಿ ವೈದಿಕರು..:
ಸಂಪ್ಯ ಉದಯಗಿರಿ ಕ್ಷೇತ್ರದ ತಂತ್ರಿಗಳಾದ ಪ್ರೀತಮ್ ಪುತ್ತೂರಾಯ ಅವರ ನೇತೃತ್ವದಲ್ಲಿ ಈ ಯಾಗವನ್ನ ಆಯೋಜಿಸಲಾಗಿತ್ತು. 12 ಮಂದಿ ಋತ್ವಿಜರು ಹಾಗೂ 135 ಮಂದಿ ವೈದಿಕರು 11ಯಜ್ಞ ಕುಂಡಗಳ ಮೂಲಕ ಅತಿರುದ್ರ ಯಾಗವನ್ನ ನಡೆಸಿದ್ರು.. ವಿಶೇಷ ಅಂದ್ರೆ ಯಾವುದೇ ಆಡಂಬರವಿಲ್ಲದೇ, ಪ್ರಚಾರವಿಲ್ಲದೇ ಕೇವಲ ಲೋಕ ಕಲ್ಯಾಣದ ದೃಷ್ಟಿಯಿಂದ ಯಾಗ ನೆರವೇರಿಸಲಾಯಿತು.
ದೇವರ ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಕರಾವಳಿ ನಾಡಲ್ಲಿ ಲೋಕ ಕಲ್ಯಾಣಕ್ಕಾಗಿ ಇಂತಹ ಯಜ್ಞ ಯಾಗಗಳು ನಡೆಯುತ್ತಿರೋದು ನಾಡಿಗೆ ಶೋಭೆಯುಂಟುಮಾಡಿದೆ. ಯಾವುದೇ ಆಡಂಬರ, ಅಬ್ಬರವಿಲ್ಲದೇ ಸಂಪ್ಯ ಉದಯಗಿರಿ ಕ್ಷೇತ್ರ ಕೈಗೊಂಡ ಮಹಾಯಾಗ ಜನ ಮನಗೆದ್ದು ಮೆಚ್ಚುಗೆಗೆ ಪಾತ್ರವಾಗಿದೆ.