ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವರ ಮೃತದೇಹ ಎಡಮಂಗಲ ಸಮೀಪದ ನಾಕೂರು ಗಯದಲ್ಲಿ ಪತ್ತೆಯಾಗಿದೆ.
ಪುತ್ತೂರು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆಹಚ್ಚಿದ್ದಾರೆ.
ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಮಂಜುನಾಥ ಶೆಟ್ಟಿ ರವರ ಪುತ್ರ, ಎಸ್ಎಸ್ಎಲ್ಸಿ ವಿದ್ಯಾರ್ಥಿ ಅದ್ವಿತ್ ಶೆಟ್ಟಿ ಮೃತ ಬಾಲಕ. ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಅದ್ವಿತ್ ಶೆಟ್ಟಿ ಮಾ.29 ರಂದು ಸಂಜೆಯಿಂದ ಕಾಣೆಯಾಗಿದ್ದರು. ನಾಕೂರು ಗಯದ ಬಳಿ ವಿದ್ಯಾರ್ಥಿಯ ಬ್ಯಾಗ್ ಪತ್ತೆಯಾಗಿದ್ದು, ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದರು.
ಮಾ.30 ರಂದು ಬೆಳಿಗ್ಗೆಯಿಂದ ನದಿಯಲ್ಲಿ ಬೋಟ್ ಮೂಲಕ ಹುಡುಕಾಟ ಆರಂಭಿಸಿದ ಅಗ್ನಿಶಾಮಕದಳದವರು ಮೃತದೇಹ ಪತ್ತೆಹಚ್ಚಿದ್ದಾರೆ.
ಪುತ್ತೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕ ಅಧಿಕಾರಿ ಪ್ರವೀಣ್ ಕುಮಾರ್ ಕೆ., ಅಗ್ನಿಶಾಮಕ ಅಧಿಕಾರಿ ಶಂಕರ್, ಅಬ್ದುಲ್ ಅಝೀಝ್, ಕೃಷ್ಣ ಜಾಲಿಬೇರ್, ಜಾಫರ್ ಅಹಮ್ಮದ್, ಚಾಲಕ ಮೋಹನ್ ಜಾಧವ್ ಹಾಗೂ ಸ್ಥಳೀಯರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.