ಉಪ್ಪಿನಂಗಡಿ : ಸುಮಾರು 7 ವರುಷಗಳ ಹಿಂದಿನ ಸಾರ್ವಜನಿಕ ಶಾಂತಿ ಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ದೋಷಮುಕ್ತರೆಂದು ನ್ಯಾಯಾಲಯ ಆದೇಶಿಸಿದೆ.
2018 ಡಿ.27 ರಂದು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಗಾಂಧಿ ಪಾರ್ಕ್ ಬಳಿ ಇರುವ ರೆಹಮಾನ್ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದು ಕೈ ಮಿಲಾಯಿಸಿಕೊಂಡು ಸಾರ್ವಜನಿಕ ಶಾಂತಿ ಭಂಗ ಮಾಡಿರುತ್ತಾರೆ ಎಂಬ ಆರೋಪ ಅಡಿಯಲ್ಲಿ ಉಪ್ಪಿನಂಗಡಿ ಠಾಣೆಯ ಠಾಣಾಧಿಕಾರಿ ಅಪರಾಧ ಸಂಖ್ಯೆ 325/16ರಂತೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುತ್ತಾರೆ. ಅದರಂತೆ ತನಿಖಾಧಿಕಾರಿಯವರು ಪ್ರಕರಣದ ಕುರಿತು ಸಮಗ್ರ ತನಿಖೆಯನ್ನು ಮಾಡಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಅದರಂತೆ ಅಭಿಯೋಜನೆಯಾಪರ ಒಟ್ಟು ಏಳುಸಾಕ್ಷಿಗಳನ್ನು ವಿಚಾರಣೆ ನಡೆಸಿ ಸುಮಾರು 5 ದಾಖಲೆಗಳನ್ನು ಗುರುತಿಸಿಕೊಂಡಿರುತ್ತಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಅಭಿಯೋಜನ ಪರವಾದ ಹಾಗೂ ಒಂದನೇ ಆರೋಪಿಯಾದ ಮಹಮ್ಮದ್ ಅಶ್ರಫ್ ರವರ ಪರವಾಗಿ ನ್ಯಾಯವಾದಿಗಳು ಕಜೆಲಾ ಚೇಂಬರ್ಸ್ ನ ಮುಖ್ಯಸ್ಥರಾದ ಮಹೇಶ್ ಕಜೆ ಮತ್ತು 2 ಮತ್ತು 3 ನೇ ಆರೋಪಿಗಳ ಪರ ನ್ಯಾಯವಾದಿ ಕೆ ಎಂ ಸಿದ್ದೀಕ್ ರವರ ವಾದವನ್ನು ಆಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ಪುತ್ತೂರು ದ.ಕ ನ್ಯಾಯಾಧೀಶರಾದ ಶಿವಣ್ಣ ಎಚ್ ಆರ್ ರವರು ಸದ್ರಿ ವಾದ ವಿವಾದವನ್ನು ಪರಿಗಣಿಸಿ ಆರೋಪಿಗಳನ್ನು ಸದ್ರಿ ಪ್ರಕರಣದಿಂದ ದೋಷ ಮುಕ್ತನೆಂದು ಆದೇಶವನ್ನು ನೀಡಿರುತ್ತಾರೆ.