ಚಂಡಾಮಾರುತದಿಂದ ಹಾನಿಗೊಳಗಾದ ಮನೆಮಂದಿಯನ್ನು ತಕ್ಷಣಕ್ಕೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಆದರೆ ಕುಟುಂಬಸ್ಥರು ಶಾಶ್ವತವಾಗಿ ಮನೆಯನ್ನು ಕಳೆದುಕೊಳ್ಳುವ ಸ್ಥಿತಿ ಇರುವುದರಿಂದ, ಸಂತ್ರಸ್ತ ಕುಟುಂಬದವರಿಗೆ ಮನೆ ರಚಿಸುವ ಕುರಿತು ಸರಕಾರಕ್ಕೆ ವರದಿ ಕಳುಹಿಸಿದ ನಂತರ ಚಿಂತನೆ ನಡೆಸಲಾಗುವುದು ಎಂದು ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
ಚಂಡಾಮಾರುತದಿಂದ ಹಾನಿಗೊಳಗಾದ ಮೊಗವೀರಪಟ್ನ, ಬಟ್ಟಪ್ಪಾಡಿ, ಸೋಮೇಶ್ವರ ಹಿಂದೂ ರುದ್ರಭೂಮಿ ಹಾಗೂ ಸೋಮೇಶ್ವರದ ಮೋಹನ್ ಎಂಬವರ ಮನೆಗೆ ಭೇಟಿ ನೀಡಿದ ನಂತರ ತೊಕ್ಕೊಟ್ಟು ಕಾಪಿಕಾಡಿನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಚಿವ ಸ್ಥಾನ ಸಿಕ್ಕಿ ಕೇವಲ ಎರಡೂವರೆ ತಿಂಗಳಾಗಿದ್ದು, ಖಾತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಿಳಿದುಕೊಳ್ಳುವ ಕೆಲಸ ಮಾಡಿದ್ದೇನೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನೆಯನ್ನೂ ಜೊತೆಗೆ ನಡೆಸುತ್ತಿದ್ದೇನೆ. ಮಂಗಳೂರಿನ ಹಳೇ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ರೂ.23 ಕೋಟಿ ಅನುದಾನ ಸ್ಥಗಿತಗೊಂಡಿತ್ತು. ಅದನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದೇನೆ” ಎಂದರು.
![](https://zoomintv.online/wp-content/uploads/2021/05/IMG-20210515-WA0076-01.jpeg)
ಇನ್ನು “ಇದೀಗ ಚಂಡಾಮಾರುತದಿಂದ ಉಳ್ಳಾಲ ಭಾಗದಲ್ಲಿ ವ್ಯಾಪಕ ನಷ್ಟ ಉಂಟಾಗಿದ್ದು, ಹಲವು ಕುಟುಂಬಗಳು ಮನೆಗಳನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಸರಕಾರ ತಾತ್ಕಾಲಿಕವಾಗಿ ಬೇರೆ ಮನೆಗಳಿಗೆ ಸ್ಥಳಾಂತರಗೊಳಿಸುವಂತೆ ಸೂಚಿಸಿದೆ. ಮನೆ ಕಳೆದುಕೊಂಡ ಕುಟುಂಬದವರಿಗೆ ಮನೆಗಳನ್ನು ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ಸಂಬಂಧಿಸಿದ ಬಂದರು ಇಲಾಖೆಯ ನಿರ್ದೇಶಕ ಸ್ವಾಮಿ ಹಾಗೂ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ ಅವರನ್ನು ಉಳ್ಳಾಲ ಪ್ರದೇಶಕ್ಕೆ ಸೋಮವಾರ ಭೇಟಿ ನೀಡುವಂತೆ ಸೂಚಿಸಿದ್ದೇನೆ. ವರದಿ ಸಂಗ್ರಹಿಸಿದ ಎರಡೇ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ.
![](https://zoomintv.online/wp-content/uploads/2021/05/IMG-20210516-WA0001-01.jpeg)
ಕೊರೊನಾ ನಡುವೆ ಸರಕಾರ ಚಂಡಾಮಾರುತದ ಕಡೆಯೂ ಗಮನ ಹರಿಸಬೇಕಿದೆ. ಮುಖ್ಯಮಂತ್ರಿಯವರ ಗಮನಕ್ಕೆ ತರುವ ಕೆಲಸವನ್ನು ಮಾಡುತ್ತೇನೆ. ಹಿಂದಿನ ಕಾಮಗಾರಿಗಳಿಗೆ ಅನುದಾನ ಮಂಜೂರಾಗದಿರುವ ಕುರಿತು ಬಂದರು ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ” ಎಂದು ಹೇಳಿದ್ದಾರೆ.
ಈ ವೇಳೆ ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ರಾಜ್ಯ ಅಲೆಮಾರಿ ಜನಾಂಗ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಕ್ಷೇತ್ರದ ಉಪಾಧ್ಯಕ್ಷ ಯಶವಂತ ಅಮೀನ್, ಕ್ಷೇತ್ರದ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಕೋಟೆಕಾರ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ರವಿಶಂಕರ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಕ್ಷೇತ್ರ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷರಾದ ರಾಜೇಶ್ ಉಳ್ಳಾಲ್, ಉಳ್ಳಾಲ ಮಹಾ ಶಕ್ತಿ ಕೇಂದ್ರದ ಸಾಮಾಜಿಕ ಜಾಲತಾಣ ಸಂಚಾಲಕರಾದ ಅವಿನಾಶ್ ಶೆಟ್ಟಿ,ಪ್ರಶಾಂತ್ ಗಟ್ಟಿ ಕೊಲ್ಯ,ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಮತ್ತು ಸ್ಥಳೀಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.