ನವದೆಹಲಿ : ಜ.22 2024ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂದೇ ಭವ್ಯ ರಾಮಮಂದಿರವನ್ನ ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಸುವರ್ಣಯುಗದ ಅಪೂರ್ವ ಕ್ಷಣಗಳನ್ನ ಕಣ್ತುಂಬಿಕೊಳ್ಳಲು ಕೋಟ್ಯಾನು ಕೋಟಿ ರಾಮನ ಭಕ್ತರು ಕಾಯುತ್ತಿದ್ದಾರೆ. ಈ ಶುಭ ಸಂದರ್ಭಕ್ಕೂ ಮುನ್ನ ರಾಮನ ಭಕ್ತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅಯೋಧ್ಯೆ ನಗರಿ ಲಕ್ಷ, ಲಕ್ಷ ಭಕ್ತರ ಆತಿಥ್ಯಕ್ಕೆ ಸಜ್ಜಾಗುತ್ತಿದೆ. ದೇಶದ ಎಲ್ಲೆಡೆಯಿಂದ ಅಯೋಧ್ಯೆಗೆ ಭೇಟಿ ನೀಡುವ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಅಯೋಧ್ಯೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಭಕ್ತರ ಸಂಖ್ಯೆ ಹೆಚ್ಚಾದ್ರೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ.
ಭಾರತೀಯ ರೈಲ್ವೇ ಇಲಾಖೆ ಮುಂದಿನ ಜನವರಿ 15ರೊಳಗೆ ಅಯೋಧ್ಯೆಯ ಹೊಸ ರೈಲ್ವೇ ನಿಲ್ದಾಣವನ್ನ ಸಜ್ಜುಗೊಳಿಸಲು ಮುಂದಾಗಿದೆ. ಹೊಸ ರೈಲ್ವೇ ನಿಲ್ದಾಣವು ನಿತ್ಯ 50 ಸಾವಿರ ಭಕ್ತರ ದಟ್ಟಣೆ ಸಾಮರ್ಥ್ಯ ಇದೆ. ಭಕ್ತಾದಿಗಳ ಊಟಕ್ಕಾಗಿ ಕೇಟರಿಂಗ್ಗೆ ವಿಶೇಷ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಮಾಡಿದೆ. ಜ.19 ರಿಂದಲೇ ದೇಶದ ಎಲ್ಲೆಡೆಯಿಂದ ಅಯೋಧ್ಯೆಗೆ 1 ಸಾವಿರ ಸ್ಪೆಷಲ್ ಟ್ರೈನ್ಗಳು ಸಂಚಾರ ಮಾಡೋಕೆ ಆರಂಭಿಸಲಿದೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ನಾಗಪುರ, ಲಖನೌ, ಜಮ್ಮುನಿಂದ ಸ್ಪೆಷಲ್ ಟ್ರೈನ್ಗಳು ಅಯೋಧ್ಯೆ ಸಂಚಾರ ಮಾಡಲಿದೆ.
ಜನವರಿ 23ರಿಂದ ರಾಮಮಂದಿರಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ದೇವಸ್ಥಾನದಲ್ಲಿ 320 ಅಡಿ ದೂರದಿಂದ ರಾಮಲಲ್ಲಾ ಮೂರ್ತಿಯನ್ನು ನೋಡಲು ನಿತ್ಯ ಒಂದರಿಂದ 2 ಲಕ್ಷ ಭಕ್ತಾದಿಗಳಿಗೆ ರಾಮಲಲ್ಲಾ ದರ್ಶನಕ್ಕೆ ಅವಕಾಶ ಇರುತ್ತದೆ.



























