ಪುತ್ತೂರು : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ವಿದ್ಯಾರ್ಥಿಗಳಿಗೆ ಜೆಸಿಐನ ಜೆಜೆಸಿ ವಿಂಗ್ ಪುತ್ತೂರು ಇದರ ವತಿಯಿಂದ ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಸಕಾರಾತ್ಮಕ ಮಾನಸಿಕ ವರ್ತನೆ ಮತ್ತು ಆತ್ಮವಿಶ್ವಾಸವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳುವುದು ಎಂಬ ವಿಷಯದ ಕುರಿತು ತರಬೇತಿ ಕಾರ್ಯಾಗಾರ ಮೇ.23 ರಂದು ನಡೆಯಿತು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ಜರುಗಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ತರಬೇತುದಾರರಾದ ಜೆಸಿ ವೇಣುಗೋಪಾಲ ಎಸ್ ಜೆ ಮತ್ತು ವಲಯ ತರಬೇತುದಾರರಾದ ಜೆ ಎಫ್ ಪಿ ದಾಮೋದರ ಪಾಟಳಿ ಇವರುಗಳು ತರಬೇತಿ ನೀಡಿದರು.
ಗೌರವ ಅತಿಥಿಗಳ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ವರದರಾಜ ಚಂದ್ರಗಿರಿ ಇವರು ಹಿಂದಿನ ಕಾಲದಲ್ಲಿ ಶಿಕ್ಷಣ ಎಂದರೆ ಜ್ಞಾನ ಸಂಪಾದನೆ ಎಂದು ಮಾತ್ರ ಇದ್ದಿತು. ಆದರೆ ಇಂದಿನ ಕಾಲದಲ್ಲಿ ಶಿಕ್ಷಣ ಎಂದರೆ ಜ್ಞಾನದ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನೆಯಲ್ಲಿದ್ದುಕೊಂಡೆ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಇಂತಹ ಕಾರ್ಯಕ್ರಮ ಸಹಕಾರಿ ಎಂದರು.
ಸಕಾರಾತ್ಮಕ ಮಾನಸಿಕ ವರ್ತನೆಯ ಕುರಿತು ತರಬೇತಿ ನೀಡಿದ ಜೆಸಿ ವೇಣುಗೋಪಾಲ್ ಎಸ್ ಜೆ ಇವರು ತಿಳಿದು ಮತ್ತು ತಿಳಿಯದೇ ಎದುರಾಗುವಂಥ ಸಮಸ್ಯೆಗಳನ್ನು ಎದುರಿಸಲು ಯಾವ ರೀತಿ ಮಾನಸಿಕವಾಗಿ ತಯಾರಾಗಿ ಸಂಘಟಿಸಿ ಅದನ್ನು ಹೇಗೆ ಸಕಾರಾತ್ಮಕವಾಗಿ ನಿಭಾಯಿಸಬೇಕೆಂದು ಹಾಗೂ ನಿಜಾಂಶವನ್ನು ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಆತ್ಮವಿಶ್ವಾಸವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂಬ ವಿಷಯದ ಬಗ್ಗೆ ತರಬೇತಿ ನೀಡಿದ ಜೆ ಎಫ್ ಪಿ ದಾಮೋದರ ಪಾಟಾಳಿ ಇವರು ನಮ್ಮ ನಿರ್ಧಾರಕ್ಕೆ ನಾವು ಯಾವಾಗಲೂ ಬದ್ಧರಾಗಿರಬೇಕು ಮತ್ತು ಅದರಲ್ಲಿ ಸಂಪೂರ್ಣ ನಂಬಿಕೆ ಇರಬೇಕು. ಹಾಗೆಯೇ ಆತ್ಮವಿಶ್ವಾಸ ಸಾಧಿಸಲು ತಾಳ್ಮೆ ಅತ್ಯಗತ್ಯ ಎಂದು ಹೇಳಿದರು.
ಕಾರ್ಯದರ್ಶಿಗಳಾದಂತಹ ಜೆಸಿ ತಿಲಕ್ ರಾಜ್ ಸಿ ಮತ್ತು ಹೃತಿಕಾ ಇವರು ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ನೀಡಿದರು. ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಸ್ವಾತಿ ಜಗನ್ನಾಥ ರೈ ಮತ್ತು ಕಾಲೇಜಿನ ಐಕ್ಯೂಎಸಿ ಸಂಯೋಜಕರು ಮತ್ತು ಎನ್ಎಸ್ಎಸ್ ಅಧಿಕಾರಿಗಳಾಗಿರುವ ಹರಿಪ್ರಸಾದ್ ಎಸ್ ಉಪಸ್ಥಿತರಿದ್ದರು.
ಗೂಗಲ್ ಮೀಟ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೆಸಿ ಪೂರ್ವಿ ಇವರು ವಂದಿಸಿದರು, ಜೆಜೆಸಿಯ ಅಧ್ಯಕ್ಷರಾದ ಸಮನ್ವಿ ರೈ ಮದಕ ಕಾರ್ಯಕ್ರಮವನ್ನು ನಿರ್ವಹಿಸಿದರು.