ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮುಡ್ನೂರು ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.
ಮೃತರನ್ನು ಅಮ್ಟಾಡಿ ಗ್ರಾಮದ ಕುಲಾಯಿ ನಿವಾಸಿ ರಾಮ ನಾಯ್ಕ (47) ಎಂದು ಗುರುತಿಸಲಾಗಿದೆ.
ರಾಮ ನಾಯ್ಕ ರವರು ಬಿಸಿರೋಡ್ ನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಡಿಕ್ಕಿಯ ರಭಸಕ್ಕೆ ರಾಮ ನಾಯ್ಕ ರವರು ರಸ್ತೆಯ ಮಧ್ಯ ಭಾಗಕ್ಕೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದರು . ಪೊಲೀಸರು ಸ್ಥಳಕ್ಕೆ ಆಗಮಿಸುವವರೆಗೂ ಯಾರೂ ಅವರನ್ನು ಮುಟ್ಟಿರಲಿಲ್ಲ. ಸುಮಾರು ಅರ್ದ ಗಂಟೆಗಳ ಕಾಲ ಮೃತದೇಹ ರಸ್ತೆಯ ಮಧ್ಯಭಾಗದಲ್ಲಿತ್ತು ಎಂದು ತಿಳಿದು ಬಂದಿದೆ.ಬಳಿಕ ಪೋಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ರಾಮನಾಯ್ಕ ಅವರು ಕಳೆದ ಅನೇಕ ವರ್ಷಗಳಿಂದ ಬಂಟ್ವಾಳ ಬೈಪಾಸ್ ನಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲಿಯಂ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.