ಮುಕ್ಕೂರು : ತನ್ನೂರಿನ ಶಾಲೆಯ ಮೇಲೆ ಪ್ರೀತಿ ಇಟ್ಟು ಹತ್ತಾರು ದಾನಿಗಳು ನೀಡಿರುವ ಬರಹದ ಪುಸ್ತಕ, ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ತೋರಬೇಕು ಎಂದು ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.

ಪುಸ್ತಕ ನೀಡೋಣ ಬನ್ನಿ ಅಭಿಯಾನ’ದಲ್ಲಿ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳು ಕೊಡಮಾಡಿದ ಬರಹದ ಪುಸ್ತಕ, ಕಲಿಕಾ ಸಾಮಾಗ್ರಿಗಳನ್ನು ಜೂ.12 ರಂದು ವಿತರಿಸಿ ಅವರು ಮಾತನಾಡಿದರು.

ವಾಟ್ಸಪ್ ಗ್ರೂಪ್ ಅನ್ನು ಧನಾತ್ಮಕ ನೆಲೆಯಲ್ಲಿ ಹೇಗೆ ಬಳಸಿಕೊಳ್ಳಬಹುದು ಅನ್ನುವುದಕ್ಕೆ ಪುಸ್ತಕ ನೀಡೋಣ ಬನ್ನಿ ಅಭಿಯಾನ ಒಂದು ಉತ್ತಮ ಉದಾಹರಣೆ. ಇಲ್ಲಿ ನೇಸರ ಯುವಕ ಮಂಡಲ ದಾನಿಗಳ ಮತ್ತು ಶಾಲೆಯ ನಡುವೆ ಒಂದು ಕೊಂಡಿಯಾಗಿ ಕೆಲಸ ಮಾಡಿದ್ದು ಇದಕ್ಕೆ ದಾನಿಗಳು ನೀಡಿದ ಸ್ಪಂದನೆ ಅಭೂತಪೂರ್ವವಾದದು ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಪುಸ್ತಕ ನೀಡೋಣ ಬನ್ನಿ ಅಭಿಯಾನ ಸ್ಪಂದಿಸಿದೆ. ಊರ ದಾನಿಗಳು ಶಾಲೆಯ ಮೇಲೆ ಇರಿಸಿದ ಪ್ರೀತಿಗೆ ಪೂರಕವಾಗಿ ಈ ಸ್ಪಂದನೆ ದೊರೆತಿದೆ. ಊರ ಶಾಲೆಯ ಅಗತ್ಯತೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಮಾತನಾಡಿ, ಮುಕ್ಕೂರು ಸರಕಾರಿ ಶಾಲೆಗೆ ಬರುವ ಹೆಚ್ಚಿನ ವಿದ್ಯಾರ್ಥಿಗಳು ಬಡ ಕುಟುಂಬದವರು. ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಈ ಊರವರು ನೀಡುತ್ತಿರುವ ಬೆಂಬಲಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಸಾಧನೆ ತೋರಬೇಕು. ಉದ್ಯೋಗ ದೊರೆತ ಮೇಲೆ ತಾನು ಕಲಿತ ಶಾಲೆಗೆ ನೆರವಾಗಲು ಈ ಕಾರ್ಯಕ್ರಮ ಸ್ಪೂರ್ತಿ ಎಂದರು.

ಶಾಲಾ ಮುಖ್ಯಗುರು ಲತಾ ಮಾತನಾಡಿ, ಈ ಊರಿನ ಜನರು ಶಾಲೆಯ ಮೇಲೆ ಅಪಾರವಾದ ಪ್ರೀತಿ ಇರಿಸಿದ್ದಾರೆ. ಶಾಲೆಗೆ ಏನೂ ಬೇಕು ಎಂದು ತಾವೇ ಕೇಳಿ ಅದನ್ನು ಪೂರೈಸುತ್ತಿರುವುದು ಇದಕ್ಕೆ ಸಾಕ್ಷಿ. ನೇಸರ ವಾಟ್ಸಪ್ ಗ್ರೂಪ್ ಮೂಲಕ ನಡೆದ ಅಭಿಯಾನದಲ್ಲಿ ಕೈ ಜೋಡಿಸಿ ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡಿದ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ ಎಂದರು.

ವೇದಿಕೆಯಲ್ಲಿ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ, ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ ಮುಖ್ಯಗುರು ಲತಾ ಸ್ವಾಗತಿಸಿದರು. ಸಹ ಶಿಕ್ಷಕಿ ಸೌಮ್ಯ ವಂದಿಸಿದರು.

ದಾನಿಗಳ ವಿವರ
ರಕ್ಷಿತ್ ಪೆರುವಾಜೆ, ಮಹೇಶ್ ಕುವೈತ್, ನೇಸರ ಯುವಕ ಮಂಡಲ ಕುಂಡಡ್ಕ- ಮುಕ್ಕೂರು, ಚಂದ್ರಹಾಸ ರೈ ಮುಕ್ಕೂರು, ಧನುಷ್ ಆಳ್ವ, ಡಾ|ನರಸಿಂಹ ಶರ್ಮಾ ಕಾನಾವು, ನರಸಿಂಹ ತೇಜಸ್ವಿ ಕಾನಾವು, ಉಮೇಶ್ ಕೆಎಂಬಿ, ಸುಧೀಂದ್ರ ಬೈಪಡಿತ್ತಾಯ, ಸೀಮಾ ಕೆ, ಗಗನ್ ಕಂರ್ಬುತ್ತೋಡಿ, ಸೀತಾರಾಮ ಕಾನಾವು, ಜಗನ್ನಾಥ ಪೂಜಾರಿ ಮುಕ್ಕೂರು, ಚಂದ್ರಶೇಖರ್ ಗೌಡ ಬೀರುಸಾಗು, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಅಭಿಷೇಕ್ ರೈ ಚೆನ್ನಾವರ, ಹೊನ್ನಪ್ಪ ಗೌಡ ಕರ್ಪುತ್ತಾರು, ಗಂಗಾಧರ ಕಲ್ಲಪಣೆ, ಪೂಜನ್, ಮಹನ್ಯ ಕಾನಾವು ಕುವೆತ್ತಡ್ಕ, ದೀಕ್ಷಾ ನೀರ್ಕಜೆ, ಭವ್ಯ ಪರುಶುರಾಮ್ ಅವರು ಬರಹದ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಯನ್ನು ಕೊಡುಗೆ ರೂಪದಲ್ಲಿ ನೀಡಿದ್ದಾರೆ.

