ಕಡಬ: ವ್ಯಕ್ತಿಯೊಬ್ಬರ ಖಾಸಗಿ ವಿಚಾರಗಳನ್ನು ಅವರ ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅವಮಾನಿಸಿದ ಆರೋಪದಲ್ಲಿ ಕಡಬ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಐತ್ತೂರು ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಪೂರ್ಣಜ್ಯೋತಿ ಎಂಬುವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಪೂರ್ಣಜ್ಯೋತಿ ಅವರ ಮಗ ಪ್ರಭಾಕರ್ ಸುಬ್ರಹ್ಮಣ್ಯರವರು ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಏಪ್ರಿಲ್ 3 ರಂದು ರಾತ್ರಿ ಸುಮಾರು 10 ಗಂಟೆಗೆ ಗಂಗಾಪ್ರಸನ್ನ ಎಂಬವರು ಪೂರ್ಣಜ್ಯೋತಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಗಲಾಟೆ ಆರಂಭಿಸಿದ್ದರು.
ಈ ಸಂದರ್ಭದಲ್ಲಿ ನೆರೆಮನೆಯ ರಾಮಚಂದ್ರ (58 ವರ್ಷ) ಮತ್ತು ಅವರ ಮಗ ಅನುಷ್ ಎಂಬವರು ತಮ್ಮ ಮೊಬೈಲ್ ಫೋನಿನಲ್ಲಿ ಇಡೀ ಘಟನೆಯನ್ನು ಅನುಮತಿ ಇಲ್ಲದೆ ವೀಡಿಯೋ ಚಿತ್ರೀಕರಿಸಿದ್ದಾರೆ. ಚಿತ್ರೀಕರಣದ ವೇಳೆ ಪೂರ್ಣಜ್ಯೋತಿ ಹಾಗೂ ಅವರ ಮಗನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಹಿಂಸೆ ನೀಡಿದ್ದಲ್ಲದೆ, ಆ ವಿಡಿಯೋವನ್ನು ಇತರರಿಗೆ ರವಾನಿಸಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೌರವಕ್ಕೆ ಧಕ್ಕೆ: ಯಾವುದೇ ಅನುಮತಿ ಇಲ್ಲದೆ ವೈಯಕ್ತಿಕ ವಿಚಾರಗಳನ್ನು ವಿಡಿಯೋ
ಮಾಡಿ ಸಾರ್ವಜನಿಕವಾಗಿ ಹರಿಬಿಟ್ಟಿರುವುದರಿಂದ ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ ಮತ್ತು ಖಾಸಗಿತನಕ್ಕೆ ಹಾನಿಯಾಗಿದೆ ಎಂದು ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಈಗ ಕಡಬ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



























