ನಟಿ ಕೃಷಿ ತಾಪಂಡ ಅವರ ನಿವಾಸದಲ್ಲಿ ಉದ್ಯಮಿ ವೈಶಾಖ್ ಮೃತಪಟ್ಟಿರುವ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾವಿಗೆ ಮುನ್ನ ವೈಶಾಖ್ ಅವರು ಕೃಷಿ ತಾಪಂಡ ಅವರಿಗೆ ಸಂದೇಶ ಕಳುಹಿಸಿದ್ದರೆಂದು ತಿಳಿದುಬಂದಿದ್ದು, ಬಳಿಕ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ವೈಶಾಖ್ ಅವರಿಗೆ ಪತ್ನಿ, ತಂದೆ-ತಾಯಿ ಸೇರಿದಂತೆ ಕುಟುಂಬವಿದ್ದು, ಅವರ ಅಕಾಲಿಕ ನಿಧನ ಕುಟುಂಬಸ್ಥರು ಮತ್ತು ಆಪ್ತರಲ್ಲಿ ಆಘಾತ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಮೃತರ ಪತ್ನಿ ಮೇಘನಾ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಘಟನೆ ನಡೆದ ತಕ್ಷಣ ಕೃಷಿ ತಾಪಂಡ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೀಗ ವೈಶಾಖ್ ಅವರ ಸಾವಿನ ಹಿನ್ನೆಲೆ, ಅವರು ಕೃಷಿ ತಾಪಂಡ ಅವರ ಮನೆಯಲ್ಲಿ ಏಕೆ ಇದ್ದರು, ಸಾವಿಗೆ ಕಾರಣವಾದ ಸಂದರ್ಭಗಳೇನು ಎಂಬ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ವೇಳೆ, ಕೃಷಿ ತಾಪಂಡ ಮತ್ತು ನಿರ್ಮಾಪಕ ಅರವಿಂದ್ ರೆಡ್ಡಿ ನಡುವೆ ಈ ಹಿಂದೆ ನಡೆದಿದ್ದ ವಿವಾದದಲ್ಲಿಯೂ ವೈಶಾಖ್ ಹೆಸರು ಕೇಳಿಬಂದಿತ್ತು. ಅರವಿಂದ್ ರೆಡ್ಡಿಗೆ ಬೆದರಿಕೆ ಕರೆ ಮಾಡಿದ ಆರೋಪದಡಿ ವೈಶಾಖ್ ಬಂಧನಕ್ಕೊಳಗಾಗಿದ್ದರೆಂಬ ಮಾಹಿತಿ ಇದೆ. ಅಲ್ಲದೆ, ಹಣ ವಸೂಲಿ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದಡಿ ಅರವಿಂದ್ ರೆಡ್ಡಿ ದೂರು ದಾಖಲಿಸಿದ್ದೂ ಚರ್ಚೆಗೆ ಕಾರಣವಾಗಿತ್ತು.
ಮತ್ತೊಂದೆಡೆ, ವೈಶಾಖ್ ಅವರ ಆಪ್ತ ಸ್ನೇಹಿತರೊಬ್ಬರು ಮಾತನಾಡಿ, “ವೈಶಾಖ್ ಖಿನ್ನತೆಗೆ ಒಳಗಾಗುವ ವ್ಯಕ್ತಿಯಲ್ಲ. ಅವರು ಧೈರ್ಯಶಾಲಿ ಸ್ವಭಾವದವರು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ನಂಬಲು ಕಷ್ಟವಾಗುತ್ತಿದೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ನಿಜಸ್ವರೂಪ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗುವ ನಿರೀಕ್ಷೆಯಿದೆ.


























