ವಿಟ್ಲ, ಜೂನ್ 27: ವಿಟ್ಲದ ಜನತಾ ಪವರ್ ಪ್ರೆಸ್ನ ಮಾಲಿಕ ಹಾಗೂ ಹಿರಿಯ ಉದ್ಯಮಿ ವೆಂಕಟೇಶ್ ಭಟ್ (88) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ತಡರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
ಮೂಲತಃ ಕೇರಳದ ಕುಂಬಳೆ ಸಮೀಪದ ಗದ್ಧೆಮಠದ ನಿವಾಸಿಯಾಗಿದ್ದ ವೆಂಕಟೇಶ್ ಭಟ್ ಅವರು 1956ರಲ್ಲಿ ವಿಟ್ಲದ ಮುಖ್ಯರಸ್ತೆಯಲ್ಲಿ ‘ಜನತಾ ಬುಕ್ ಸ್ಟಾಲ್’ ಆರಂಭಿಸುವ ಮೂಲಕ ಉದ್ಯಮ ಜೀವನಕ್ಕೆ ಕಾಲಿಟ್ಟಿದ್ದರು. ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವಲ್ಲಿ ಜನತಾ ಬುಕ್ ಸ್ಟಾಲ್ ಪ್ರಮುಖ ಸ್ಥಾನ ಪಡೆದಿತ್ತು.
1962ರಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಅಗತ್ಯವನ್ನು ಮನಗಂಡು ‘ಜನತಾ ಪವರ್ ಪ್ರೆಸ್’ ಅನ್ನು ಸ್ಥಾಪಿಸಿದರು. ಮುದ್ರಣ ಕ್ಷೇತ್ರದಲ್ಲಿ ಅಚ್ಚುಕಟ್ಟಾದ ಗುಣಮಟ್ಟ, ಶುದ್ಧ ಕನ್ನಡ ಬಳಕೆ ಹಾಗೂ ತಪ್ಪು ರಹಿತ ಮುದ್ರಣಕ್ಕಾಗಿ ಜನತಾ ಪವರ್ ಪ್ರೆಸ್ ಜಿಲ್ಲೆಯಾದ್ಯಂತ ಹೆಸರುವಾಸಿಯಾಯಿತು. ಹಲವು ದಶಕಗಳಿಂದ ಸಾವಿರಾರು ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ವೆಂಕಟೇಶ್ ಭಟ್ ಅವರ ನಿಧನಕ್ಕೆ ವಿಟ್ಲ ಹಾಗೂ ಸುತ್ತಮುತ್ತಲಿನ ಉದ್ಯಮಿಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವ್ಯಾಪಾರ ಮತ್ತು ಮುದ್ರಣ ಕ್ಷೇತ್ರಕ್ಕೆ ಅವರು ನೀಡಿದ ಸೇವೆ ಚಿರಸ್ಮರಣೀಯ ಎಂದು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
was



























