ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿ, ಪುತ್ತೂರು ಇಲ್ಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಳಿಗೆ ತರಬೇತಿ ಪ್ರಾರಂಭವಾಗಿದ್ದು, ತರಬೇತಿಯನ್ನು ಪುತ್ತೂರು ಉಪವಿಭಾಗ ಡಿ.ವೈ.ಎಸ್.ಪಿ. ಪ್ರಮೋದ್ ಕುಮಾರ್ ಬಿ. ಯವರು ಉದ್ಘಾಟಿಸಿದರು. ಕರಾವಳಿ ಭಾಗದಲ್ಲಿ ಸರಕಾರಿ ಹುದ್ದೆಗಳಿಗೆ ಪ್ರಯತ್ನಪಡುವವರ ಸಂಖ್ಯೆ ಕಮ್ಮಿ ಇದ್ದು, ವಿದ್ಯಾಮಾತಾ ಅಕಾಡೆಮಿ ಇಂತಹ ಸಂದರ್ಭದಲ್ಲಿ ಜಾಗೃತಿಯನ್ನು ಮೂಡಿಸಿಕೊಂಡು ತರಬೇತಿ ನೀಡುವುದರ ಮೂಲಕ ಸರಕಾರಿ ಹುದ್ದೆಗಳಿಗೆ ಕರಾವಳಿ ಭಾಗದಿಂದ ಕೂಡ ಹೋಗಬಹುದು ಎಂದು ನಿರೂಪಿಸಿದ್ದಾರೆ. ಪೋಲಿಸ್ ಸೇವೆಗಳಿಗೆ ಇನ್ನಷ್ಟು ಈ ಭಾಗದ ಯುವಕರು ಸೇರುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕೂಡ ಸ್ಥಳೀಯ ಅಭ್ಯರ್ಥಿಗಳೇ ಆಯ್ಕೆಯಾಗಬೇಕು ಎಂದು ಪ್ರಯತ್ನ ಪಡುತ್ತಿದೆ. ಸ್ಥಳೀಯ ಅಭ್ಯರ್ಥಿಗಳೇ ಆಯ್ಕೆಯಾದರೆ, ಸ್ಥಳೀಯ ಜನರ ನಾಡಿಮಿಡಿತ, ಆಚಾರ ವಿಚಾರಗಳ ಅನುಭವವಿರುತ್ತದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ನಡೆಯುವ ಯಾವುದೇ ಘಟನೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತದೆ. ಸರಕಾರ ಸುಮಾರು 70,000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿದ್ದು, ನೇಮಕಾತಿಗಳ ಹಬ್ಬವೇ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕಿದೆ. ” ಎಂದು ತರಬೇತಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡ್ರಗ್ಸ್ ಇತ್ಯಾದಿ ಮಾದಕ ದ್ರವ್ಯಗಳಿಗೆ ಯುವಸಮುದಾಯ ಬಲಿಯಾಗುತ್ತಿರುವ ಬಗ್ಗೆಯೂ ಜಾಗೃತಿಯನ್ನು ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳು ಡ್ರಗ್ಸ್ ಇತ್ಯಾದಿ ಮಾದಕ ದ್ರವ್ಯಗಳಿಗೆ ಬಲಿಯಾಗದೆ ಸದೃಢ ಬದುಕನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ IAS / KAS ಪರೀಕ್ಷೆಗಳ ಪ್ರಖ್ಯಾತ ತರಬೇತುದಾರ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಗಮಿಸಿದ ವಿದ್ಯಾಮಾತಾದ ಗೌರವ ತರಬೇತುದಾರರಾದ ರಘುನಾಥ್ ರವರು ” ನಾನು ರಾಜ್ಯದಾದ್ಯಂತ ಹತ್ತು ಹಲವಾರು ತರಬೇತಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ವಿದ್ಯಾಮಾತಾ ಅಕಾಡೆಮಿಯಲ್ಲಿ ಎಲ್ಲಿಯೂ ಇಲ್ಲದ ಶಿಸ್ತು, ಡಿಜಿಟಲ್ ತರಬೇತಿ ವ್ಯವಸ್ಥೆ, ಗ್ರಂಥಾಲಯ ಇದೆ. ಇದನ್ನು ಈ ಭಾಗದ ಯುವಸಮುದಾಯ ಉಪಯೋಗಿಸಕೊಳ್ಳಬೇಕು. ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ರವರು ಪ್ರಾಸ್ತಾವಿಕ ನೆಲೆಯಲ್ಲಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ, ವಿದ್ಯಾಮಾತಾ ಅಕಾಡೆಮಿಯ ಹಿತೈಷಿ ಮನೋಹರ್ ರೈ ರವರು, ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಹಾಗೂ ತರಬೇತುದಾರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು


























