ಹಾಡಹಗಲೇ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ತಂದೆ, ಮಗಳನ್ನೇ ಭೀಕರವಾಗಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದವರನ್ನು ಮಾಜಿ ಯೋಧ ರುದ್ರಪ್ಪ ಕುಂದರಗಿ(67) ಮತ್ತು ಪುತ್ರಿ ಶಶಿಕಲಾ (26) ಎಂದು ಗುರುತಿಸಲಾಗಿದೆ.
ಕಿತ್ತೂರು ತಾಲ್ಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಗೆ ಇಂದು ಬೆಳಗ್ಗೆ ರುದ್ರಪ್ಪ ಅವರು ಮಗಳೊಂದಿಗೆ ಹೋಗಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ದುಷ್ಕರ್ಮಿಗಳು ರುದ್ರಪ್ಪ ಅವರ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದಾಗ ಮಗಳು ಶಶಿಕಲಾ ತಡೆಯಲು ಮಧ್ಯೆ ಬಂದಿದ್ದಾಳೆ.
ಆ ಸಂದರ್ಭದಲ್ಲಿ ಆಕೆಯ ಮೇಲೂ ಕುಡುಗೋಲಿನಿಂದ ದಾಳಿ ಮಾಡಿ ಜಡೆ ಕತ್ತರಿಸಿ ಮನಬಂದಂತೆ ಕೊಚ್ಚಿ ತಂದೆ, ಮಗಳನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಿತ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಆಸ್ತಿ ವಿಚಾರವಾಗಿ ರುದ್ರಪ್ಪ ಮತ್ತು ಅವರ ಸಹೋದರರ ನಡುವೆ ಜಗಳವಾಗುತ್ತಿತ್ತು.ಈ ವಿಚಾರಕ್ಕೆ ಜೋಡಿ ಕೊಲೆ ನಡೆದಿದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಡಹಗಲೇ ನಡೆದಿರುವ ಜೋಡಿ ಕೊಲೆಗೆ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.



























