ಪುತ್ತೂರು: ಜನವರಿಯಲ್ಲಿ ಬಲ್ನಾಡು ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್ನಲ್ಲಿದ್ದ ಪುತ್ತೂರು, ಸುಳ್ಯ ಮತ್ತು ಬಂಟ್ವಾಳ ತಾಲೂಕಿನ 7ಮಂದಿ ಮೃತಪಟ್ಟಿರುವ ಕುಟುಂಬಕ್ಕೆ ಪರಿಹಾರಕ್ಕಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಮನವಿಯಂತೆ ಮುಖ್ಯಮಂತ್ರಿಗಳು ಮೃತರ ಕುಟುಂಬಕ್ಕೆ ತಲಾ ರೂ. 2ಲಕ್ಷ ಪರಿಹಾರವನ್ನು ಮಂಜೂರು ಮಾಡಿದ್ದಾರೆ.
ಬಸ್ ಅಪಘಾತದಿಂದ ಬಲ್ನಾಡು ಚನಿಲ ಪಾಲೆಚ್ಚಾರು ಚೋಮ ನಾಯ್ಕರವರ ಪುತ್ರ ರಾಜೇಶ್(38.ವ) ಅವರ ಪುತ್ರ ಆದರ್ಶ(14ವ), ಕುಂಜೂರುಪಂಜ ದೇವಸ್ಯ ನಾರಾಯಣರವರ ಪುತ್ರಿ ಸುಮತಿ(26, ಪಾಣಾಜೆ ಆರ್ಲಪದವು ಅರ್ಧಮೂಲೆ ನಾರಾಯಣರವರ ಪುತ್ರ ಶ್ರೇಯಸ್(13.ವ), ಸುಳ್ಯ ಸೋಣಂಗೇರಿ ಜಾಲ್ಸೂರು ಗ್ರಾಮದ ಕುಕ್ಕಂದೂರು ನಾರಾಯಣ ನಾಯ್ಕರವರ ಪುತ್ರ ರವಿಚಂದ್ರ(40.ವ) ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಸಮೀಪದ ಕಳೆಂಜಿಲ ವಸಂತ ನಾಯ್ಕ ಪತ್ನಿ ಸೇಸಮ್ಮ ಯನೆ ಜಯಲಕ್ಷ್ಮೀ, ನಿರ್ವಾಹಕ ಬಂಟ್ವಾಳ ನರಿಕೊಂಬು ಶ್ರೀಧರ ಪೂಜಾರಿಯವರ ಪುತ್ರ ಶಶಿಧರ ಮೃತಪಟ್ಟಿದ್ದರು.
ಮೃತಪಟ್ಟವರೆಲ್ಲರು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಾಗಿದ್ದು, ಇವರುಗಳು ಮದುವೆ ಸಮಾರಂಭಕ್ಕೆ ಹೋಗುತ್ತಿರುವಾಗ ಬಸ್ಸು ಅಪಘಾತಕ್ಕೊಳಗಾಗಿ ಏಳು ಜನರು ಮೃತಪಟ್ಟಿದ್ದು, ಅಪಘಾತದ ಸ್ಥಳ ಕೇರಳ ರಾಜ್ಯವಾಗಿದೆ.ಅದೇ ರೀತಿ ಬಸ್ಸಿಗೆ ಯಾವುದೇ ತರಹದ ವಿಮೆ ಇರುವುದಿಲ್ಲ, ಮೃತಪಟ್ಟಿ ಏಳು ಜನರಿಗೆ ಜೀವವಿಮೆ ಇಲ್ಲದ ಕಾರಣ ಹಾಗೂ ಇವರು ಬಡ ಹಾಗೂ ಕೃಷಿ ಕಾರ್ಮಿಕರಾಗಿರುವುದರಿಂದ, ಇವರುಗಳಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೃತಪಟ್ಟ ಕುಟುಂಬಗಳಿಗೆ ಸಹಾಯ ಧನ ಮಂಜೂರು ಮಾಡುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹಾಗೂ ಶಾಸಕ ಸಂಜೀವ ಮಠಂದೂರು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.
ಮುಖ್ಯಮಂತ್ರಿಯವರು ಮೃತರ ಕುಟುಂಬಕ್ಕೆ ಸಾಂತ್ವಾನ ವ್ಯಕ್ತಪಡಿಸುತ್ತಾ, ತಲಾ ರೂ.2,00,000/- (ಎರಡು ಲಕ್ಷ)ದಂತೆ ಒಟ್ಟು ಏಳು (7) ಜನರಿಗೆ ಒಟ್ಟು ರೂ.ಹದಿನಾಲ್ಕು ಲಕ್ಷ (14,00,000/-ಗಳನ್ನು ಪರಿಹಾರ ನಿಧಿಯಿಂದ ಪರಿಹಾರವಾಗಿ ಮಂಜೂರು ಮಾಡಿದ್ದಾರೆ.