ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯರ ಪಂಚೆ ಕಳಚಿ ಹೋಗಿತ್ತು. ಈ ವಿಚಾರ ಸದನವನ್ನ ಕೆಲ ಕಾಲ ನಗೆಗಡಲಲ್ಲಿ ತೇಲಿಸಿತು.
ಸಿದ್ದರಾಮಯ್ಯ ಭಾಷಣ ಮಾಡಲು ಎದ್ದು ನಿಲ್ಲುತ್ತಿದ್ದಂತೆ.. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓಡೋಡಿ ಬಂದು, ‘ನಿಮ್ಮ ಪಂಚೆ ಕಳಚಿ ಹೋಗಿದೆ’ ಎಂದು ಸಿದ್ದರಾಮಯ್ಯರ ಕಿವಿಯಲ್ಲಿ ಹೇಳಿದರು. ಅದಕ್ಕೆ ‘ಹೌದಾ’ ಎಂದ ಸಿದ್ದರಾಮಯ್ಯ ಅಲ್ಲಿಯೇ ಕಟ್ಟಿಕೊಳ್ಳಲು ಮುಂದಾದರು. ಆದರೆ ಅದು ಆಗಲಿಲ್ಲ. ನಂತರ ಖುರ್ಚಿ ಮೇಲೆ ಕೂತುಕೊಂಡ ಸಿದ್ದರಾಮಯ್ಯ.. ‘ಸ್ವಲ್ಪ ಪಂಚೆ ಕಳಚಿಕೊಂಡು ಬಿಟ್ಟಿದೆ.. ಅದನ್ನ ಕಟ್ಟಿಕೊಂಡು ಆಮೇಲೆ ಮಾತನಾಡುತ್ತೇನೆ’ ಎಂದರು.
ಆಗ ಸದನದ ಕೆಲ ಸದಸ್ಯರು ಜೋರಾಗಿ ನಕ್ಕರು.. ಆಗ ಸ್ಪೀಕರ್ ಸ್ಥಾನದಲ್ಲಿದ್ದ ಕುಮಾರ ಬಂಗಾರಪ್ಪ.. ‘ವಿಚಾರ ಅಂತದ್ದು ಅಂತಾ ಹೇಳಿದ್ರೂ ಸ್ವಲ್ಪ ಕಷ್ಟ’ ಎಂದು ನಕ್ಕರು. ಆಗ ‘ಪಂಚೆ ಕಳಚಿಕೊಂಡು ಬಿಟ್ಟಿದೆ ಈಶ್ವರಪ್ಪ.. ಯಾಕೋ ಇತ್ತೀಚೆಗೆ ಹೊಟ್ಟೆ ದಪ್ಪ ಆಯ್ತು.. ಕಳಚಿಕೊಳ್ತಿದೆ..’ ಎಂದ ಸಿದ್ದರಾಮಯ್ಯ ಮತ್ತೆ ಮಾತನಾಡಲು ಎದ್ದು ನಿಂತರು.
ಮತ್ತೆ ಕುಮಾರ ಬಂಗಾರಪ್ಪ ಮಾತನಾಡಿ.. ‘ಇಲ್ಲ, ಇಲ್ಲ ನೀವು ಜಿಂದಾಲ್ಗೆ ಹೋಗಿ ಬಂದ ಮೇಲೆ ಸ್ವಲ್ಪ ಕಡಿಮೆ ಆಗಿರುವಿರಿ.’ ಎಂದರು. ಅಷ್ಟರಲ್ಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶ ಮಾಡಿ.. ‘ಅಲ್ಲ.. ಅಲ್ಲ.. ನಮ್ಮ ಪಕ್ಷದ ಅಧ್ಯಕ್ಷರು.. ಗುಟ್ಟಾಗಿ ಬಂದು ಕಿವಿಯಲ್ಲಿ ಬಂದು ಹೇಳಿದರೇ.. ಇವರು ಅದನ್ನ ಊರಿಗೆಲ್ಲ ಹೇಳ್ತಾರೆ.. ನಿಮ್ಮ (ಡಿಕೆಎಸ್) ಶ್ರಮವೆಲ್ಲ ವ್ಯರ್ಥವಾಯ್ತು.. ಅವರ (ಬಿಜೆಪಿ) ಉದ್ಯೋಗವೇ ನಮ್ಮ ಮಾನವನ್ನ ಕಳಚೋದು’ ಅಂತಾ ರಮೇಶ್ ಕುಮಾರ್ ಬಿಜೆಪಿ ಮತ್ತು ಸಿದ್ದರಾಮಯ್ಯರ ಕಾಲೆಳೆದರು.
ಮತ್ತೆ ಪಂಚೆ ಬಿಚ್ಚಿದ್ದನ್ನ ಸಮರ್ಥಿಸಿಕೊಂಡ ಸಿದ್ದರಾಮಯ್ಯ.. ಪಂಚೆ ಬಿಚ್ಚುತ್ತಿರಲಿಲ್ಲ.. ಇತ್ತೀಚೆಗೆ ಕೊರೊನಾ ಬಂದ ಬಳಿಕ ನಾನು ಸ್ವಲ್ಪ ಕೆಜಿ ಜಾಸ್ತಿಯಾದೆ. ಬೆಲ್ಲಿ ಕೂಡ ಜಾಸ್ತಿ ಬಂದು ಬಿಡ್ತು.. ಅದರಿಂದ ಪಂಚೆ ಕಳಚಿಕೊಳ್ಳಲು ಶುರುವಾಯ್ತು.. ಬಹಳ ಮಂದಿ ನಿಲುವಂಗಿ ಹಾಕಿಕೊಳ್ತಾರೆ.. ಆ ಅಂಗಿ ಮೊಳಕಾಲವರೆಗೆ ಇರುತ್ತದೆ.. ಆ ಅಂಗಿ ಹಾಕಿಕೊಂಡಾಗ, ಪ್ಯಾಂಟೂ, ಪಂಚೆ ಯಾವುದನ್ನೂ ಹಾಕಿಕೊಳ್ಳಲ್ಲ..’ ಅಂದ್ರು ಅದಕ್ಕೆ ಇಂತಹ ಸಂದರ್ಭದಲ್ಲಿ ಅದು ರಕ್ಷಣೆ ಕೊಡುತ್ತೆ ಎಂದು ಸದನದ ಸದಸ್ಯರು ಹೇಳಿದ್ರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ರಕ್ಷಣೆಗೆ ಇರಲಿ ಅಂತಲೇ ಇಂತಹ ಜುಬ್ಬವನ್ನ ಹೊಲಿಸಿಕೊಂಡಿರೋದು ಅನ್ನೋ ಮೂಲಕ ಮತ್ತೆ ಹಾಸ್ಯ ಚಟಾಕಿ ಹಾರಿಸಿದರು.