ಬಂಟ್ವಾಳ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ.ರೋಡು – ಅಡ್ಡಹೊಳೆ ಚತುಷ್ಪಥ (63 ಕಿ.ಮೀ.) ಕಾಮಗಾರಿ ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದ್ದು, ಕಲ್ಲಡ್ಕದಲ್ಲಿ 6 ಲೇನ್ ಫ್ಲೈ ಓವರ್ ನಿರ್ಮಾಣಕ್ಕೆ ತಯಾರಿ (ಪ್ರಿ ಕನ್ಸ್ಟ್ರಕ್ಷನ್ಸ್ ಆ್ಯಕ್ಟಿವಿಟಿ) ಆರಂಭಗೊಂಡಿದೆ.
ಬಿ.ಸಿ.ರೋಡಿನಿಂದ ಪೆರಿಯಶಾಂತಿ ವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್ನ ಕೆಎನ್ಆರ್ ಕನ್ಸ್ಟ್ರಕ್ಷನ್ಸ್ ಲಿಮಿಟೆಡ್ 1,100.88 ಕೋ.ರೂ.ಗಳಿಗೆ ವಹಿಸಿಕೊಂಡಿದೆ. ಕಲ್ಲಡ್ಕದಲ್ಲಿ ಮಾತ್ರ 6 ಲೇನ್ಗಳ ಫ್ಲೈ ಓವರ್ ಇರಲಿದೆ.
ಉದನೆಯಲ್ಲಿ ಯಂತ್ರಗಳ ಅಳವಡಿಕೆ:
ಪೆರಿಯಶಾಂತಿಯಿಂದ ಅಡ್ಡಹೊಳೆ ವರೆಗಿನ 15 ಕಿ.ಮೀ. ಕಾಮಗಾರಿಯನ್ನು 317 ಕೋ.ರೂ.ಗಳಿಗೆ ಮಹಾರಾಷ್ಟದ ಎಸ್.ಎಂ. ಔತಾಡೆ ಪ್ರೈ ಲಿ. ಕಂಪೆನಿ ನಿರ್ವಹಿಸಲಿದೆ. ಈಗಾಗಲೇ ಶಿರಾಡಿಯ ಉದನೆಯಲ್ಲಿ ಯಂತ್ರಗಳ ಅನುಷ್ಠಾನ ಕಾರ್ಯ ಆರಂಭಿಸಿದೆ.
ಕಲ್ಲಡ್ಕದಲ್ಲಿ ಯಾವ ರೀತಿಯಲ್ಲಿ ಹೆದ್ದಾರಿ ಸಾಗಲಿದೆ ಎಂಬ ಕುರಿತು ಗೊಂದಲಗಳಿದ್ದು, ಪೇಟೆಯ ಮೂಲಕವೇ ಚತುಷ್ಪಥ ಸಾಗಲಿದೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಬೈಪಾಸ್ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ರಾ.ಹೆ. ಪ್ರಾಧಿಕಾರವು ಫ್ಲೈ ಓವರ್ ನಿರ್ಮಾಣವನ್ನೇ ಅಂತಿಮಗೊಳಿಸಿತ್ತು.
ಅಳಿಸಿ ಹೋದ ಮಾರ್ಕಿಂಗ್..!
ಹಲವು ಸಮಯದ ಹಿಂದೆಯೇ ಕಲ್ಲಡ್ಕದ ಕೆ.ಸಿ.ರೋಡ್ನಿಂದ ಕುದ್ರೆಬೆಟ್ಟು ವರೆಗೆ ಫ್ಲೈ ಓವರ್ ಮಾರ್ಕಿಂಗ್ ಮಾಡಲಾಗಿದ್ದು, ಆರಂಭ – ಅಂತ್ಯದಲ್ಲಿ ಫ್ಲೈ ಓವರ್ ಸ್ಟಾರ್ಟ್ಸ್- ಫ್ಲೈ ಓವರ್ ಎಂಡ್ಸ್ ಎಂದು ಬರೆಯಲಾಗಿತ್ತು. ಆದರೆ ಡಾಮರು ಕಾಮಗಾರಿ ವೇಳೆ ಅದು ಮುಚ್ಚಿ ಹೋಗಿದೆ.
ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣದ ಮುಂಚಿತವಾಗಿ ಭೂತಾಂತ್ರಿಕ ಪರಿಶೀಲನಾ ಕಾರ್ಯ ಆರಂಭಗೊಂಡಿದೆ. ಫ್ಲೈ ಓವರ್ ನಿರ್ಮಾಣದ ಪೂರ್ವಭಾವಿಯಾಗಿ ಪೂರ್ಲಿಪಾಡಿಯಿಂದ ಕೆ.ಸಿ.ರೋಡ್ ವರೆಗೆ ಭೂತಾಂತ್ರಿಕ ಪರಿಶೀಲನೆ (ಜಿಯೋಟೆಕ್ನಿಕಲ್ ಇನ್ವೆಸ್ಟಿಗೇಶನ್) ಆರಂಭಗೊಂಡಿದೆ. ಬೃಹತ್ ಪಿಲ್ಲರ್ಗಳ ನಿರ್ಮಾಣಕ್ಕಾಗಿ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯವು ಯಂತ್ರೋಪಕರಣಗಳ ಮೂಲಕ ನಡೆಯುತ್ತಿದೆ.
ಪ್ರಸ್ತುತ ಕಾಮಗಾರಿಯ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಎಲ್ಲೂ ಕಾಮಗಾರಿ ಆರಂಭಗೊಂಡಿಲ್ಲ. ಅಪಾಯಿಂಟೆಡ್ ದಿನಾಂಕ ಅಂತಿಮಗೊಂಡ ಬಳಿಕವೇ 63 ಕಿ.ಮೀ. ಹೆದ್ದಾರಿಯ ಎಲ್ಲ ಕಾಮಗಾರಿಗಳು ಒಂದೇ ಸಮಯದಲ್ಲಿ ಆರಂಭಗೊಳ್ಳಲಿದೆ. ಸದ್ಯ ದಿನಾಂಕ ಪ್ರಕಟವಾಗಿಲ್ಲ ಎಂದು ಮಂಗಳೂರು ಎನ್ಎಚ್ಎಐ ಯೋಜನಾ ನಿರ್ದೇಶಕ ಶಿಶುಮೋಹನ್ ಹೇಳಿದ್ದಾರೆ.