ವಿಟ್ಲ: ಹಿರಿಯ ಹೋಟೆಲ್ ಉದ್ಯಮಿ, ಪ್ರಗತಿಪರ ಕೃಷಿಕ, ಸೆರ್ಕಳ ಮಲರಾಯಿ ಬಂಟ ದೈವಸ್ಥಾನದ ಅಧ್ಯಕ್ಷರಾದ ಸದಾಶಿವ ಶೆಟ್ಟಿ(70) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಸುಮಾರು ಐವತ್ತು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಸೆರ್ಕಳ ಸದಾಶಿವ ಶೆಟ್ಟರು ಕಳೆದ ಮೂವತ್ತು ವರ್ಷಗಳಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪದ ರಾವ್ & ರಾವ್ ಸರ್ಕಲ್ ರಸ್ತೆಯ ಕ್ಯಾಂಪ್ಕೋ ಪಕ್ಕದ ಕೀರ್ತಿ ಲಾಡ್ಜಿಂಗಲ್ಲಿ ತಾಜಾ ಮೀನಿನ ಊಟದ ಹೋಟೆಲ್ ನಡೆಸುವ ಮೂಲಕ ಚಿರಪರಿಚಿತರಾಗಿದ್ದರು. ಇದೇ ಕಾರಣಕ್ಕಾಗಿ ಹೋಟೇಲ್ ಸದಾಶಿವಣ್ಣ ಎಂದೇ ಸಾರ್ವಜನಿಕವಾಗಿ ಗುರುತಿಸಿದ್ದರು.
ಕೊಡುಗೈದಾನಿಯಾಗಿದ್ದ ಶೆಟ್ಟರು ಕೊಳ್ನಾಡು ಗ್ರಾಮದ ಸೆರ್ಕಳದ ಮಲರಾಯಿ ಬಂಟ ದೈವಸ್ಥಾನದ ಅಧ್ಯಕ್ಷರಾಗಿ ಜೀರ್ಣೋದ್ಧಾರ ಕಾರ್ಯ ನೆರವೇರಿಸುವ ಮೂಲಕ ಧಾರ್ಮಿಕ ಮುಂದಾಳುವಾಗಿ ಗುರುತಿಸಿದ್ದರು. ಸೆರ್ಕಳ ಶ್ರೀ ಮಾರಿಯಮ್ಮ ಯುವಕ ಸಂಘದ ಪ್ರತಿಯೊಂದೂ ಸಮಾಜಸೇವೆಯ ಬೆನ್ನೆಲುಬಾಗಿದ್ದ ಶೆಟ್ಟರು, ಪ್ರಗತಿಪರ ಕೃಷಿಕರೂ, ಸಾಲೆತ್ತೂರು ವಲಯ ಬಂಟರ ಸಂಘದ ಮಹಾ ಪೋಷಕರು ಹಾಗೂ ಮಾರ್ಗದರ್ಶಕರಾಗಿದ್ದರು.
ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಸದಾಶಿವ ಶೆಟ್ಟರು ಅಲ್ಪ ಕಾಲದ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು(ಬುಧವಾರ) ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಶೆಟ್ಟರು ನಿಧನರಾಗಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.