ಉಡುಪಿ: ಮನೆಯಿಂದ ಆಟವಾಡಲು ಹೊರ ಹೋದ ಅಪ್ರಾಪ್ತ ಯುವಕರಿಬ್ಬರು ನಿನ್ನೆ ನಾಪತ್ತೆಯಾಗಿ ಮತ್ತೆ ಹೊಳೆಯಲ್ಲಿ ಇಂದು ಶವವಾಗಿ ಪತ್ತೆಯಾದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂತಾರು ಗ್ರಾಮದ ಪ್ರಿಯೋರಿಟಿ ಕ್ವಾರ್ಟರ್ಸ್ ಬಳಿ ನಡೆದಿದೆ.
ಮೃತರನ್ನು ಚಾಂತಾರು ನಿವಾಸಿ ಉದಯ್ ಕುಮಾರ್ ಎಂಬವರ ಪುತ್ರ ಶ್ರೇಯಸ್ (18) ಹಾಗೂ ವಾರಂಬಳ್ಳಿಯ ಸ್ವರ್ಣನಗರ ಸನ್ಶೈನ್ ಬಿಲ್ಡಿಂಗ್ ನಿವಾಸಿ ಅನಾಸ್ (16) ಎಂದು ಗುರುತಿಸಲಾಗಿದೆ.
ಶ್ರೇಯಸ್ ನಿನ್ನೆ ಮಧ್ಯಾಹ್ನ ಆಟವಾಡಲು ಹೊರಗೆ ಹೋಗುವುದಾಗಿ ಹೋಗಿದ್ದನು. ಆದರೆ ರಾತ್ರಿಯಾದರೂ ಮನೆಗೆ ಬಾರದ ಶ್ರೆಯಸ್ ಬಗ್ಗೆ ಪೋಷಕರು ಹುಡುಕಾಟ ನಡೆಸಿ ಸ್ನೇಹಿತ ಸಂಜಯ್ರಾಜ್ ಬಳಿ ವಿಚಾರಿಸಿದ್ದಾರೆ. ಆಗ ಸಂಜಯ್ ರಾಜ್ ತನಗೇನೂ ಗೊತ್ತಿಲ್ಲ ಎಂಬುವುದಾಗಿ ತಿಳಿಸಿದ್ದಾನೆ. ಈ ಮಧ್ಯೆ ಉಪ್ಪೂರು ಗ್ರಾಮದ ಉಗ್ಗೇಲ್ಬೆಟ್ಟು ರೈಲ್ವೇ ಬ್ರಿಜ್ನ ಕೆಳಗೆ ಮಡಿಸಾಲು ಹೊಳೆಯಲ್ಲಿರುವ ರೈಲ್ವೇ ಬ್ರಿಜ್ನ ಪಿಲ್ಲರ್ ಪುಟ್ಟಿಂಗ್ ಮೇಲೆ ಒಂದು ಬ್ಯಾಗ್, 2 ಜೊತೆ ಚಪ್ಪಲಿ, ಮಿರಿಂಡಾ ಬಾಟಲ್, ರಿಂಗ್ ಆಗುತ್ತಿರುವ ಮೊಬೈಲ್ ಇರುವ ಬಗ್ಗೆ ಸ್ಥಳೀಯರೊಬ್ಬರು ರಾತ್ರಿ ಮಾಹಿತಿ ನೀಡಿದ್ದರು.
ಈ ವೇಳೆ ಅಲ್ಲಿ ತೆರಳಿ ನೋಡಿದಾಗ ಶ್ರೇಯಸ್ ಮನೆಯಿಂದ ಹೊರಹೋಗುವಾಗ ಧರಿಸಿದ್ದ ವಸ್ತ್ರ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡು ಸಂಜಯ್ ರಾಜ್ ಬಳಿ ಮತ್ತೆ ಕೂಲಂಕುಷವಾಗಿ ವಿಚಾರಿಸಿದಾಗ ತಾನು, ಶ್ರೇಯಸ್, ಹಾಗೂ ಅನಾಸ್ ಒಟ್ಟಾಗಿ ಮೂವರು ಈಜಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಆಳದ ಜಾಗಕ್ಕೆ ಇಳಿದ ಅನಾಸ್ ಹಾಗೂ ಶ್ರೇಯಸ್ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಸಂಜಯ್ರಾಜ್ ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸಿ ಆಗದೇ ಇದ್ದಾಗ ಹೆದರಿ ನೇರವಾಗಿ ಹೊರಟು ತನ್ನ ಮನೆಗೆ ತೆರಳಿದ್ದಾನೆ.
ಈ ಬಗ್ಗೆ ಪೊಲೀಸರಿಗೆ ತಿಳಿದಾಗ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಹೊಳೆಯಲ್ಲಿ ಶವಕ್ಕಾಗಿ ಹುಡುಕಾಡಿದ್ದು, ನಿನ್ನೆ ರಾತ್ರಿಯಾದ ಕಾರಣ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಶ್ರೇಯಸ್ ಮತ್ತು ಅನಾಸ್ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.