ಉಡುಪಿ: ಕಾಪುವಿನ ಕೋತಲ್ ಕಟ್ಟೆ ರಾಹೆ 66ರಲ್ಲಿ ವಾಕಿಂಗ್ ಹೋದ ವ್ಯಕ್ತಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.
ಮೃತ ವ್ಯಕ್ತಿಯನ್ನು ಊಳಿಯಾರಗೋಳಿ ಗ್ರಾಮದ ಕೆಳತೋಟ ನಿವಾಸಿ ಗೋವಿಂದ ಪೂಜಾರಿ(65) ಎಂದು ಗುರುತಿಸಲಾಗಿದೆ.
ಗೋವಿಂದ ಪೂಜಾರಿ ರಸ್ತೆ ದಾಟಲು ನಿಂತಿದ್ದ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಆಂಬ್ಯುಲೆನ್ಸ್ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಗೋವಿಂದ ಪೂಜಾರಿಯವರು ಗಾಯಗೊಂಡಿದ್ದು, ಅವರನ್ನು ತುರ್ತಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಆಂಬ್ಯುಲೆನ್ಸ್ ನ ಮುಂಭಾಗ ನಜ್ಜುಗುಜ್ಜಾಗಿದ್ದು, ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಮತ್ತೊಂದು ಆಂಬ್ಯುಲೆನ್ಸ್ ನಲ್ಲಿ ಮಂಗಳೂರಿಗೆ ಸಾಗಿಸಲಾಗಿದೆ. ಘಟನೆಯಲ್ಲಿ ಚಾಲಕ ಮಣಿಯವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಆಂಬ್ಯುಲೆನ್ಸ್ ಚಾಲಕ ಮಣಿಯ ವಿರುದ್ದ ಕೈಪುಂಜಾಲು ನಿವಾಸಿ ಯೋಗೀಶ್ ಪೂಜಾರಿಯವರ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.