ಬೆಂಗಳೂರು: ಟಿಕ್ಟಾಕ್ ನಲ್ಲಿ ಪರಿಚಯವಾಗಿ ರೀಲ್ಸ್ ಮಾಡುತ್ತಾ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ ಯುವಕ, ಮದುವೆಯಾದ ಬಳಿಕ ಪತ್ನಿಯನ್ನ ಬಿಟ್ಟು ಹೋದ ಘಟನೆ ನಗರದಲ್ಲಿ ನಡೆದಿದೆ. ಸದ್ಯ ತನಗೆ ಪತಿ ಬೇಕು ಎಂದು ಪತ್ನಿ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೌದು, ಅಂದು ನೀನೇ ಬೇಕು ಅಂಥ ಮದುವೆ ಮಾಡಿಕೊಂಡವ ಇರೋ ಹಣವನ್ನ ಖರ್ಚು ಮಾಡಿ ಬಿಟ್ಟು ಹೋಗಿದ್ದಾನೆ. ಈತನ ಪ್ರೀತಿಯನ್ನೇ ನಂಬಿ ಮನೆ, ಕುಟುಂಬ, ಪೋಷಕರನ್ನು ಬಿಟ್ಟು ಬಂದಿದ್ದ ಯುವತಿ, ಇಂದು ಗಂಡನೂ ಇಲ್ಲದೇ, ಪೋಷಕರು ಇಲ್ಲದೇ ದಿಕ್ಕುತೋಚದ ಸ್ಥಿತಿಯಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಏನಿದು ಪ್ರಕರಣ..?
ಹುಬ್ಬಳಿ ಮೂಲದ ಯುವತಿಗೆ ಟಿಕ್ಟಾಕ್ನಲ್ಲಿ ರಮೇಶ್ ಎಂಬ ಯುವಕನ ಪರಿಚಯವಾಗಿತ್ತು. ಯುವತಿಯ ಜೊತೆ ವಿಡಿಯೋ ಮಾಡಿ ಡ್ಯುಯೆಟ್ ಮಾಡುತ್ತಿದ್ದ ರಮೇಶ್, ಟಿಕ್ಟಾಕ್ ಬಳಿಕ ಇನ್ಸ್ ಸ್ಟಾ ರೀಲ್ಸ್ಗೂ ಎಂಟ್ರಿ ಕೊಟ್ಟಿದ್ದ. ಅಲ್ಲದೇ ನೀನೇ ಬೇಕು, ಮದುವೆ ಮಾಡ್ಕೊತೀನಿ ಅಂಥ ಹಿಂದೆ ಬಿದ್ದಿದ್ದ. ಈತನ ಬಣ್ಣದ ಮಾತುಗಳನ್ನು ನಂಬಿದ್ದ ಯುವತಿ ಮನೆಯವನ್ನ ಬಿಟ್ಟು ಚಿನ್ನಾಭರಣ, ಹಣ ಸಮೇತ ಬೆಂಗಳೂರಿಗೆ ಬಂದಿದ್ದಳು.

ಇತ್ತ ಬೆಂಗಳೂರಿಗೆ ಯುವತಿ ಬರುತ್ತಿದ್ದಂತೆ ನಗರದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ ಆಸಾಮಿ, ಬಳಿಕ ಬಾಡಿಕೆ ಮನೆಯೊಂದನ್ನ ಮಾಡಿ ಆಕೆಯೊಂದಿಗೆ ಸಂಸಾರ ಶುರು ಮಾಡಿದ್ದನಂತೆ. ತನ್ನದೇ ಗ್ಯಾರೇಜ್ ಹಾಗೂ ಪಿಜಿಯೊಂದರಲ್ಲಿ ಕೆಲಸ ಮಾಡ್ತಿದ್ದ ಆತ ಬ್ಯುಸಿನೆಸ್ ಮಾಡ್ಬೇಕು ಅಂಥ ಆಕೆಯ ಬಳಿ ಇದ್ದ ಚಿನ್ನಾಭರಣವನ್ನೂ ಮಾರಾಟ ಮಾಡಿದ್ದ. ಅಲ್ಲದೇ ಆಕೆ ತಂದಿದ್ದ ಲಕ್ಷ ಲಕ್ಷ ಹಣ ಖರ್ಚು ಮಾಡಿದ್ದ. ಇಷ್ಟು ಸಾಲದು ಅಂಥ ಆಕೆಯ ಹೆಸರಿನಲ್ಲಿ 2 ಲಕ್ಷ ರೂಪಾಯಿ ಸಾಲ ಕೂಡ ಪಡೆದು ಖರ್ಚು ಮಾಡಿದ್ದ ಎನ್ನಲಾಗಿದೆ.
ಹಣ ಎಲ್ಲಾ ಖಾಲಿಯಾದ ತನ್ನ ವರಸೆ ಬದಲಿಸಿದ್ದ ಆಸಾಮಿ ಯುವತಿಯನ್ನು ಮನೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇತ್ತ ಪೋಷಕರು, ಗಂಡನೂ ಇಲ್ಲದೇ ಯುವತಿ ಕಂಗಾಲಾಗಿದ್ದು, ಸದ್ಯ ಪತಿಯನ್ನ ಹುಡುಕಿಕೊಡಿ ಎಂದು ಕೆ.ಆರ್ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.