ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಸಾಹುಲ್ ಹಮೀದ್ ಎಂಬಾತನ ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೈದ ಘಟನೆಯನ್ನು ಖಂಡಿಸಿ, ಮತ್ತು ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮತ್ತು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎ.9 ರಂದು ಕನ್ಯಾನದಲ್ಲಿ ಬಂದ್ ಆಚರಿಸುವಂತೆ ಮತ್ತು ನಾಲ್ಕು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಕರೆ ನೀಡಿದೆ.
ವಿಟ್ಲದಲ್ಲಿ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್ ಅವರು ಶಾಹುಲ್ ಹಮೀದ್ ಎಂಬಾತ ಅಪ್ರಾಪ್ತ ಬಾಲಕಿಗೆ ವಾಮಾಚಾರ ಮಾಡಿ ವಶೀಕರಣ ಮೂಲಕ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾನೆ. ಇದರಿಂದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಆಕೆಗೆ ನ್ಯಾಯ ಸಿಗಬೇಕು. ಸರಕಾರಕ್ಕೆ ನಮ್ಮ ಧ್ವನಿ ಮುಟ್ಟಿಸುವ ಉದ್ದೇಶದಿಂದ ಸೋಮವಾರ ಕನ್ಯಾನದಲ್ಲಿ ಎಲ್ಲ ಹಿಂದೂ ಬಂಧುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಬೇಕು.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಾವಿರಾರು ಮುಸ್ಲಿಂ ಯುವಕರು ಲವ್ ಜಿಹಾದ್ ಮೂಲಕ ಹಿಂದೂ ಹೆಣ್ಣು ಮಕ್ಕಳ ಜೀವನ ಹಾಳು ಮಾಡುತ್ತಿದ್ದಾರೆ. ಈ ಬಂದ್ ಮತ್ತು ಪ್ರತಿಭಟನೆ ನಮ್ಮ ವಿರೋಧಿಗಳಿಗೆ ಎಚ್ಚರಿಕೆಯ ಕರೆಗಂಟೆ ಆಗಬೇಕು.
ಈ ಘಟನೆ ಬಗ್ಗೆ ಬಗ್ಗೆ ನಿಷ್ಪಕ್ಷವಾದ ತನಿಖೆ ನಡೆಯಬೇಕು. ಸಾಹುಲ್ ಹಮೀದ್ ಕುಟುಂಬವನ್ನು ತನಿಖೆಗೊಳಪಡಿಸಬೇಕು. ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡಬೇಕು. ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ತರಬೇಕು. ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.
