ಅತಿಯಾದ ತಂತ್ರಜ್ಞಾನದಿಂದಲೋ ಏನೋ ಇವತ್ತು ಮಕ್ಕಳ ಭವಿಷ್ಯ ಆತಂಕಕಾರಿಯಾಗಿದೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಮಕ್ಕಳ ಯೋಚನೆಗಳು ಬೇರೆ ಬೇರೆ ಕಡೆ ಸಾಗುತ್ತಿದೆ. ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಸಲುವಾಗಿ ಮಕ್ಕಳ ಬ್ಯಾಗ್ ತಪಾಸಣೆ ಮಾಡಿದ್ದಾರೆ. ಮಕ್ಕಳ ಬ್ಯಾಗ್ನಲ್ಲಿದ್ದ ವಸ್ತುಗಳನ್ನು ನೋಡಿದ ಶಿಕ್ಷಕರು ಹಾಗೂ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ.
ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ತರ್ತಿದ್ದಾರೆ ಅನ್ನೋ ದೂರು ಕೇಳಿ ಬಂದಿತ್ತು. ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವ್ಯವಸ್ಥಾಪಕ ಮಂಡಳಿ ಮಕ್ಕಳ ಬ್ಯಾಗ್ ತಪಾಸಣೆ ಮಾಡುವಂತೆ ಶಾಲೆಗಳಿಗೆ ಸಲಹೆ ನೀಡಿತ್ತು. 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್ ತಪಾಸಣೆ ಮಾಡಿದಾಗ ಕಂಡಿದ್ದು ವಿದ್ಯಾರ್ಥಿಗಳು ಬಳಸಬಾರದಂತ ವಸ್ತುಗಳು.. ಕೆಲ ವಿದ್ಯಾರ್ಥಿಗಳ ಬ್ಯಾಗ್ಗಳಲ್ಲಿ ಮೊಬೈಲ್ ಅಲ್ಲದೇ ಕಾಂಡೋಮ್ಗಳು, ಗರ್ಭನಿರೋಧಕ ಮಾತ್ರೆಗಳು, ಲೈಟರ್, ಸಿಗರೇಟ್ಗಳು, ವೈಟ್ನರ್ಗಳು, ನೀರಿನ ಬಾಟಲಿಗಳಲ್ಲಿ ಅಲ್ಕೋಹಾಲ್ ಇರುವುದೂ ಪತ್ತೆಯಾಗಿದೆ.
ಮಕ್ಕಳ ಮನಸ್ಥಿತಿ ಬಗ್ಗೆ ತಜ್ಞರ ಕಳವಳ..!!
ಮಕ್ಕಳ ಬ್ಯಾಗ್ಗಳಲ್ಲಿ ಕಾಂಡೋಮ್, ಸಿಗರೇಟ್ ಪತ್ತೆಯಾಗ್ತಿರೋದಕ್ಕೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ನಾವಿಂದು ಕಾಣಬೇಕಾದ ಮೌಲ್ಯಗಳ ಬಗ್ಗೆ ಕಣ್ಮುಚ್ಚಿ ಕುಳಿತಿದ್ದೇವೆ. ಸಮಾಜ, ಪಾಲಕರು, ಶಿಕ್ಷಣ ಸಂಸ್ಥೆ ನಿದ್ರಾವಸ್ಥೆಯಲ್ಲಿದೆ. ಮಕ್ಕಳ ಬೆಳವಣಿಗೆಯಲ್ಲಿ ಕುಟುಂಬದ ಪಾತ್ರ ಮುಖ್ಯವಾಗಿದೆ. ಆದ್ರೆ ಉತ್ತಮ ಅಂಕ, ಒಳ್ಳೆಯ ನೌಕರಿ, ಸಂಪಾದನೆಯನ್ನೇ ಪೋಷಕರು ಮಕ್ಕಳ ತಲೆಗೆ ತುಂಬುತ್ತಾರೆ. ಇದರಿಂದ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿವೆ. ಹೀಗಾಗಿ ಶಾಲಾ ಮಕ್ಕಳಲ್ಲಿ ಕ್ರೌರ್ಯ ಹೆಚ್ಚಾಗುತ್ತಿದೆ. ಮಕ್ಕಳ ಸಾಕಲು ತಂದೆ-ತಾಯಿ ನಡುವೆಯೇ ಪ್ರತಿಸ್ಪರ್ಧೆ ಏರ್ಪಟ್ಟಿದೆ. ಪೋಷಕರು ಸಂಪಾದನೆಗೆ ಮಹತ್ವ ನೀಡ್ತಿರೋದ್ರಿಂದ ಮೌಲ್ಯಗಳು ಮರೆಯಾಗ್ತಿವೆ.
ಪೋಷಕರಿಗೆ ತಜ್ಞರ ಸಲಹೆಗಳು..
- ಮಕ್ಕಳೊಂದಿಗೆ ಪೋಷಕರು ಹೆಚ್ಚು ಸಮಯ ಕಳೆಯಿರಿ, ನಿಮ್ಮ ಒತ್ತಡದ ಜೀವನದಲ್ಲಿ ಮಕ್ಕಳನ್ನು ನಿರ್ಲಕ್ಷಿಸಬೇಡಿ.
- ಮಕ್ಕಳ ಆಹಾರ ಪದ್ಧತಿ ಮೇಲೆ ಗಮನವಿರಲಿ. ಜಂಕಫುಡ್, ಆನ್ಲೈನ್ ಫುಡ್ಗಳನ್ನು ಮಕ್ಕಳಿಗೆ ಕೊಡಿಸಬೇಡಿ. ಇದು ಮಕ್ಕಳ ದೈಹಿಕ & ಮಾನಸಿಕ ಬದಲಾವಣೆಗೆ ಕಾರಣವಾಗಿದೆ.
- ಕೋವಿಡ್ ಬಳಿಕ ಮೊಬೈಲ್ ಬಳಕೆ ಹೆಚ್ಚಾಗಿದೆ. ಮಕ್ಕಳ ಮೊಬೈಲ್ ಬಳಕೆ ಬಗ್ಗೆ ಎಚ್ಚರವಿರಲಿ. ಮಕ್ಕಳ ಸ್ನೇಹಿತರು, ನಡವಳಿಕೆ ಮೇಲೆ ಗಮನವಿರಲಿ.
- ಹದಿಹರೆಯದ ಮಕ್ಕಳಿಗೆ ವಿಶೇಷ ಸಮಾಲೋಚನೆ ಕಡ್ಡಾಯ ಮಾಡಬೇಕಿದೆ ಅಂತ ಸಲಹೆ ನೀಡಿದ್ದಾರೆ.
ಮಕ್ಕಳ ಬ್ಯಾಗ್ನಲ್ಲಿ ಕಾಂಡೋಮ್, ಸಿಗರೇಟ್ ಪತ್ತೆ ವಿಚಾರಕ್ಕೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಮಕ್ಕಳ ಬಗ್ಗೆ ಪೋಷಕರು ಗಮನ ಹರಿಸ್ತಿಲ್ಲ. ಪಾಠ-ಪ್ರವಚನಕ್ಕಿಂತ ಬೇರೆ ವಿಚಾರಗಳೇ ನಡೆಯುತ್ತಿವೆ. ಶಿಕ್ಷಕರ ಕೈ ಕಟ್ಟಿ ಹಾಕಿದ್ದಾರೆ., ಪ್ರಶ್ನೆ ಮಾಡುವ ಹಕ್ಕು ಕಿತ್ತುಕೊಳ್ಳಲಾಗಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೆ ತಂದರೂ ನೋ ರೆಸ್ಪಾನ್ಸ್ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಮುಂದಾದ್ರೂ ಮಕ್ಕಳ ಬಗ್ಗೆ ಎಚ್ಚರ ವಹಿಸುವಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ ಸೂಚನೆ ನೀಡಿವೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅಂತ ಹೇಳ್ತಾರೆ. ಭವ್ಯ ಭಾರತದ ಭವಿಷ್ಯ ಬರೆಯುವ ಮಕ್ಕಳು ಹಾದಿ ತಪ್ಪಿದ್ರೆ ಅದನ್ನು ಊಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಜಾಗೃತಿ, ಸಲಹೆಗಳು, ಸರ್ಕಾರದ ಪಾತ್ರ ಮುಖ್ಯವಾಗಲಿದೆ..