ಚುನಾವಣೆ ಗೆಲ್ಲೋಕೆ ಕಮಲ ಪಡೆ ಸಮರಾಭ್ಯಾಸ ಶುರುಮಾಡಿದೆ. ಎಲೆಕ್ಷನ್ ಘೋಷಣೆಗೂ ಮುನ್ನವೇ ದೆಹಲಿಯ ಕಮಲ ತಂಡ ನಾಯಕರು ಕರುನಾಡಿನತ್ತ ಬರ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಎಂಟ್ರಿ ಕೊಡ್ತಿದ್ದಾರೆ. ನಿನ್ನೆ ಬಿಜೆಪಿ ಭದ್ರ ಕೋಟೆಗೆ ಎಂಟ್ರಿ ಕೊಟ್ಟಿದ್ದ ಅಮಿತ್ ಶಾ ಕರಾವಳಿಯಲ್ಲಿ ಕೇಸರಿ ಅಲೆ ಎಬ್ಬಿಸಿದ್ದಾರೆ. ಚುನಾವಣೆಗೆ
ರಣ ಕಹಳೆ ಮೊಳಗಿಸಿ ಮತಬೇಟೆಯಾಡಿದ್ದಾರೆ.
ಜಿಲ್ಲಾ ಪ್ರಮುಖರಿಗೆ ಟಾಸ್ಕ್ ಕೊಟ್ಟ ಚುನಾವಣಾ ಚಾಣಕ್ಯ:
ಮಂಗಳೂರಿನಲ್ಲಿ ಅಮಿತ್ ಶಾ 4 ಜಿಲ್ಲೆಯ ಜಿಲ್ಲಾ ಪ್ರಮುಖರ ಜೊತೆ ಸಭೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಈಶ್ವರಪ್ಪ ಕೂಡ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದರು. ಚುನಾವಣಾ ಅಖಾಡಕ್ಕೆ ಹೇಗೆ ಧುಮುಕಬೇಕು. ನಮ್ಮ ಸಿದ್ಧತೆ ಹೇಗಿರಬೇಕು ಅಂತಾ ಅಮಿತ್ ಶಾ ಮಹತ್ವದ ಸಭೆಯಲ್ಲಿ ಜಿಲ್ಲಾ ಪ್ರಮುಖರಿಗೆ ಸೂಚನೆ ನೀಡಿದರು ಎನ್ನಲಾಗಿದೆ.
ಪ್ರತಿ ಬೂತ್ನಿಂದ 15 ಯುವ ಕಾರ್ಯಕರ್ತರ ಪಡೆ ರಚಿಸಬೇಕು ಯಾವುದೇ ಕಾರಣಕ್ಕೂ ಬೂತ್ ಮಟ್ಟವನ್ನ ನಿರ್ಲಕ್ಷ್ಯ ಮಾಡಬಾರದು. 15 ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖರು ಭೇಟಿ ನೀಡಬೇಕು. ಶೇ.33ರಷ್ಟು ಬೂತ್ಗಳಿಗೆ ಪ್ರಮುಖರು ಭೇಟಿ ನೀಡಲೇಬೇಕು ಅಂತಾ ಅಮಿತ್ ಶಾ
ಜಿಲ್ಲಾ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಬೂತ್ನಿಂದ 15 ಯುವ ಕಾರ್ಯಕರ್ತರ ಪಡೆ ರಚಿಸಿ,
ಯುವಕರ ತಂಡದ ಮೂಲಕ ರ್ಯಾಲಿಗಳನ್ನು ಆಯೋಜಿಸಬೇಕು. ಚುನಾವಣಾ ವಾತಾವರಣ ನಿರ್ಮಿಸಿ 2018ರ ಫಲಿತಾಂಶ ಮತ್ತೊಮ್ಮೆ ಪುನರಾವರ್ತನೆ ಆಗಬೇಕೆಂದು ಅಮಿತ್ ಶಾ ಜಿಲ್ಲಾ ಪ್ರಮುಖರಿಗೆ ಟಾಸ್ಕ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ನಾಯಕರಿಗೆ ಶಾ ಕ್ಲಾಸ್ :
ಚುನಾವಣೆ ಹತ್ತಿರವಾಗುತ್ತಿದ್ದು, ಮಂಗಳೂರು ಹಾಗೂ ಶಿವಮೊಗ್ಗ ವಿಭಾಗಗಳ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಹಾಗಾಗಿ ಎಲ್ಲೆಲ್ಲಿ ಶಾಸಕರ ವಿರುದ್ಧ ಅಸಮಾಧಾನವಿದೆಯೋ ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ ಎಂದು ಕೇಂದ ಗೃಹ ಸಚಿವ ಅಮಿತ್ ಶಾ ಬಿಜೆಪಿ ಜನಪ್ರತಿನಿಧಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಅಸಮಾಧಾನ ಶಮನಗೊಳಿಸಿ ಕರಾವಳಿಯ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬಗ್ಗೆ ಇರುವ ಅಸಮಾಧಾನದ ಬಗ್ಗೆ ಮಾಹಿತಿ ಪಡೆದಿದ್ದ ಅಮಿತ್ ಶಾ, ಅದನ್ನು ಕೂಡಲೇ ಶಮನಗೊಳಿಸಲು ಕಾರ್ಯ ಪ್ರವೃತ್ತರಾಗಿ, ಬಿಕ್ಕಟ್ಟು ಶಮನಕ್ಕೆ ಮುಂದಾಗಿ, ಅಗತ್ಯವಿದ್ದರೆ ಪಕ್ಷದ ಹಿರಿಯರ ನೆರವನ್ನು ಪಡೆಯಿರಿ, ಅಸಮಾಧಾನ ಇರುವಲ್ಲಿಗೆ ತೆರಳದೆ ಇರುವುದು ಸಲ್ಲದು. ಹಾಗಾಗಿ ಎಲ್ಲ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರನ್ನು ಮಾತನಾಡಿಸಿ, ಪಕ್ಷ ಸಂಘಟನೆಗೆ ಅವರನ್ನು ಹುರಿದುಂಬಿಸಿ. ಒಂದು ತಿಂಗಳಲ್ಲಿ
ಎಲ್ಲ ಕ್ಷೇತ್ರಗಳಲ್ಲೂ ಶಾಸಕರು ಪ್ರವಾಸ ಪೂರ್ಣಗೊಳಿಸಬೇಕು
ಎಂದು ಗಡುವು ವಿಧಿಸಿದರು.
ಹಾಲಿ ಶಾಸಕರು ಕ್ಷೇತ್ರಗಳ ಪೂರ್ಣ ಪ್ರವಾಸ ಮುಗಿಸಬೇಕು. ಎರಡು ವಿಭಾಗಗಳ ಆರು ಜಿಲ್ಲೆಗಳಲ್ಲಿ 33 ಕ್ಷೇತ್ರಗಳ ಪೈಕಿ 29ರಲ್ಲಿ ಬಿಜೆಪಿ ಗೆದ್ದಿದೆ. ಆದರೆ 4 ಕ್ಷೇತ್ರ ಕೈ ತಪ್ಪಿದೆ. ಅವುಗಳನ್ನೂ ಗೆಲ್ಲಲು ಕಾರ್ಯತಂತ್ರ ರೂಪಿಸಿ ಕಾರ್ಯಶೀಲರಾಗಬೇಕು. ಅದಕ್ಕಾಗಿ ಎಸ್ ಸಿ, ಮಹಿಳಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು
ಕ್ರಿಯಾಶೀಲಗೊಳಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆ ಬಳಿಕ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಅಮಿತ್ ಶಾ ಮಾರ್ಗದರ್ಶನ ನೀಡಿದ್ದಾರೆ ಅಂತಾ ತಿಳಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಸರ್ವೇ ಮಾಡಿ, ಆಯಾ ಸ್ಥಳ, ಅಲ್ಲಿಯ ಜಾತಿವಾರು ಲೆಕ್ಕಾಚಾರದಲ್ಲಿ ಟಿಕೆಟ್ ನೀಡೋದಾಗಿ ಅಮಿತ್ ಶಾ ಹೇಳಿದ್ದಾರೆಂದು ತಿಳಿಸಿದರು.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ 33 ಕ್ಷೇತ್ರಗಳನ್ನೂ
ಗೆಲ್ಲಬೇಕೆಂದು ಅಮಿತ್ ಶಾ ಟಾಸ್ಕ್ ಕೊಟ್ಟಿರೋದಾಗಿ ಸಚಿವ
ಸುನೀಲ್ ಕುಮಾರ್ ಹೇಳಿದ್ರು. 33 ಕ್ಷೇತ್ರಗಳ ಪೈಕಿ 29ರಲ್ಲಿ
ಬಿಜೆಪಿ ಜಯ ಗಳಿಸಿದ್ರೆ, 4 ಕಾಂಗ್ರೆಸ್ ಕೈಯಲ್ಲಿದೆ. ಉಳಿದ 4
ಕ್ಷೇತ್ರಗಳನ್ನೂ ಗೆಲ್ಲುವ ಬಗ್ಗೆ ಚರ್ಚೆ ನಡೆಸಿರುವುದಾಗಿ ಸುನೀಲ್ ಕುಮಾರ್ ತಿಳಿಸಿದರು.
ಅಮಿತ್ ಶಾ ಬ್ಯಾಕ್ ಟು ಬ್ಯಾಕ್ ಆಗಮನ ರಾಜ್ಯ ಕಮಲ
ನಾಯಕರಿಗೆ ಉತ್ಸಾಹವನ್ನ ಹೆಚ್ಚಿಸಿದೆ. ಭದ್ರಕೋಟೆಯನ್ನ
ಮತ್ತಷ್ಟು ಬಲಪಡಿಸುವಂತೆ ಹೇಳಿ ಶಾ ದೆಹಲಿಗೆ ವಾಪಸ್ ಆಗಿದ್ದಾರೆ. ರಾಜ್ಯ ಕಮಲ ನಾಯಕರಿಗೆ ಟಾಸ್ಕ್ ಕೊಟ್ಟು ತೆರಳಿದ್ದಾರೆ. ಚುನಾವಣೆ ಹೊತ್ತಲ್ಲೇ ಕರಾವಳಿ ಮಲೆನಾಡು ರಾಜಕೀಯದಲ್ಲಿ ಅಮಿತ್ ಶಾ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿರೋದು ಸುಳ್ಳಲ್ಲ…