ಪುತ್ತೂರು: ಜನತೆಯ ಬಹುಕಾಲದ ಬೇಡಿಕೆಯಾದ ಎಪಿಎಂಸಿ ರಸ್ತೆಯಲ್ಲಿ 14 ಕೋಟಿ ವೆಚ್ಚದಲ್ಲಿ ರೈಲ್ವೆ ಅಂಡರ್ಪಾಸ್ ನಿರ್ಮಾಣಗೊಂಡಿದೆ. ಇದರ ಲೋಕಾರ್ಪಣಾ ಕಾರ್ಯಕ್ರಮವು ಮಾ.26 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.
ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್. ಅಂಗಾರ, ರೈಲ್ವೆ ಮತ್ತು ಎಪಿಎಂಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
4 ತಿಂಗಳ ಹಿಂದೆಯಷ್ಟೇ ಕಾಮಗಾರಿ ಆರಂಭಗೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತ್ವರಿತಗತಿಯಲ್ಲಿ ಅಂಡರ್ಪಾಸ್ ನಿರ್ಮಾಣಗೊಂಡಿದೆ. ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.
ಈ ಹಿಂದೆ ಪುತ್ತೂರು ನಗರದಿಂದ ಎಪಿಎಂಸಿ ರಸ್ತೆಯ ಮೂಲಕ ಹೋಗುವ ವಾಹನಗಳು ರೈಲ್ವೆ ಹಳಿಯವರೆಗೆ ಬಂದು ಅಲ್ಲಿಂದ ಹಳಿ ದಾಟಿ ಮುಂದೆ ಸಾಗಬೇಕಿತ್ತು. ಈ ವೇಳೆ ಹಳಿಗಳಲ್ಲಿ ರೈಲು ಸಂಚರಿಸುತ್ತಿದ್ದರೇ ಅಥಾವ ರೈಲು ಬರುವ ಸಂದರ್ಭ ಗೇಟು ಬಂದ್ ಮಾಡಿ ಸಂಪರ್ಕ ರಸ್ತೆಯನ್ನು ಮುಚ್ಚಲಾಗುತ್ತಿತ್ತು. ದಟ್ಟ ವಾಹನ ಸಂಚಾರವಿದ್ದ ರಸ್ತೆಯಲ್ಲಿ ಆಳವಡಿಸಲಾಗಿದ್ದ ಈ ವ್ಯವಸ್ಥೆಯಿಂದ ವಾಹನ ಚಾಲಕರಿಗೆ ಬಹಳಷ್ಟು ಸಮಸ್ಯೆಗಳಾಗಿತ್ತು. ಹೀಗಾಗಿ ಇಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದರು.
ಅಂಡರ್ ಪಾಸ್ ಲೋಕಾರ್ಪಣೆಯ ಬಳಿಕ ಈ ಪದ್ಧತಿಗೆ ತಿಲಾಂಜಲಿ ನೀಡಲಾಗುತ್ತಿದ್ದು, ಹೊಸ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರಿಸಲು ಅವಕಾಶ ಕಲ್ಪಿಸಲಾಗುತ್ತದೆ. ರೈಲು ಗೇಟುಗಳ ಪಕ್ಕದಲ್ಲಿ ತಿರುವು ರಸ್ತೆ ನಿರ್ಮಿಸಿದ್ದು, ಅದರಲ್ಲಿ ಸುಮಾರು 500 ಮೀಟರ್ನಷ್ಟು ದೂರ ಅಂಡರ್ಪಾಸ್ ಮೂಲಕ ಸಾಗಿ ಮುಖ್ಯ ರಸ್ತೆಯನ್ನು ಸೇರುವಂತೆ ಹೊಸ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ.