ರಾಜ್ಯದಲ್ಲಿ ಚುನಾವಣಾ ಅಸಲಿ ಆಟ ಶುರುವಾಗಿದೆ. ಮತ ಶಿಕಾರಿಯು ಜೋರಾಗಿ ನಡೆಯುತ್ತಿದೆ. ಅಭ್ಯರ್ಥಿಗಳು ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಕಳೆದ 3 ತಿಂಗಳಿಂದ ಭರ್ಜರಿ ಸಮಾವೇಶ ನಡೆಸಿ ಜನರನ್ನ ಸೇರಿಸಿ ಮತಬೇಟಿಯಾಡುತ್ತಿದ್ದಾರೆ. ಆತಂಕದ ವಿಷಯ ಅಂದ್ರೆ ಕರ್ನಾಟಕ ಸೇರಿ ದೇಶದ ಹಲವೆಡೆ ಕೊರೋನಾ ಕೇಸ್ಗಳು ಏರಿಕೆಯಾಗುತ್ತಿವೆ.
ಕಳೆದ 3 ತಿಂಗಳಿನಿಂದ ಕರುನಾಡಲ್ಲಿ ರಾಜಕೀಯ ಪಕ್ಷಗಳು ಪತಬೇಟೆಗೆ ಇಳಿದಿವೆ. ಇಷ್ಟು ದಿನ ಒಂದು ಲೆಕ್ಕವಾದರೆ ಇನ್ನು ಮುಂದೆ ಮತ್ತೊಂದು ಲೆಕ್ಕ. ಪ್ರಚಾರದ ಅಖಾಡ ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗೇರಲಿದೆ. ಈ ಬೆನ್ನಲ್ಲೇ ರಾಜ್ಯಕ್ಕೆ ಶಾಕ್ ಎದುರಾಗಿದೆ. ಕರ್ನಾಟಕ ಸೇರಿ ದೇಶದಲ್ಲಿ ಕೊರೊನಾ ಕೇಸ್ಗಳು ಕೂಡ ಏರಿಕೆಯಾಗಲು ಶುರುವಾಗಿವೆ.
ದೇಶದಲ್ಲಿ ನಿಧಾನವಾಗಿ ಕೊರೊನಾ ಕೇಸ್ಗಳು ಏರಿಕೆಯಾಗೋಕೆ ಶುರುವಾಗಿದೆ. ಇಷ್ಟು ದಿನ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಕೊರೊನಾ ಮತ್ತೆ ಶಾಕ್ ಕೊಟ್ಟಿದೆ.
ಕೊರೊನಾ ರಿಟರ್ನ್ಸ್..!!!
- ದೇಶದಲ್ಲಿ ನಿನ್ನೆ ಒಂದೇ ದಿನ 3,016 ಹೊಸ ಕೊರೊನಾ ಕೇಸ್ ಪತ್ತೆ
- ಕಳೆದ 6 ತಿಂಗಳಿನಲ್ಲಿ ನಿನ್ನೆಯೇ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆ
- ದೇಶಾದ್ಯಂತ 13,509ಕ್ಕೆ ತಲುಪಿದ ಸಕ್ರಿಯ ಪ್ರಕರಣಗಳ ಸಂಖ್ಯೆ
- ರಾಜ್ಯದಲ್ಲಿ ಬುಧವಾರ ಒಂದೇ ದಿನ 215 ಕೊರೊನಾ ಕೇಸ್ ಪತ್ತೆ
- ಬೆಂಗಳೂರಿನಲ್ಲಿ ಮಾತ್ರ 75 ಕೊರೊನಾ ಕೇಸ್ಗಳು
- ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 694 ಹೊಸ ಕೊರೊನಾ ಕೇಸ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ 300ಕ್ಕೆ ತಲುಪುತ್ತಿದ್ದಂತೆ ಮಾಸ್ಕ್ ನಿಯಮ ಜಾರಿಗೊಳಿಸಲಾಗಿದೆ. ಕೊರೊನಾ ಲಕ್ಷಣಗಳಿರುವ ವ್ಯಕ್ತಿಗಳು ಆಸ್ಪತ್ರೆಗಳಿಗೆ ಹೋಗುವಾಗ ಮಾಸ್ಕ್ ಧರಿಸುವಂತೆ ಸೂಚಿಸಿದೆ. ಅಲ್ಲದೆ ಜನರು ಯಾವುದೇ ಕಾರಣಕ್ಕೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.
ಇಷ್ಟು ದಿನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಕೊರೊನಾ ಐ ಆ್ಯಮ್ ಬ್ಯಾಕ್ ಅಂದಿದೆ. ರಾಜಕೀಯ ಸಮಾವೇಶ, ಸಭೆ ಸಮಾರಂಭಗಳಲ್ಲಿ ಕಿಕ್ಕಿರಿದು ಸೇರುವ ಜನರಿಗೆ ಎಚ್ಚರಿಕೆ ಗಂಟೆ ಬಾರಿಸಿದೆ. ಅದೇನೆ ಇರಲಿ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳಿತು..