ಪುತ್ತೂರು : ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಮನೆಯನ್ನು ಬೆಳಗಿಸಿದೆ ಮತ್ತು ಪ್ರತೀ ಕುಟುಂಬಕ್ಕೂ ತಲುಪಿದೆ. ಶಕ್ತಿ ಯೋಜನೆಯಿಂದ ಕಾಂಗ್ರೆಸ್ ಎಲ್ಲರಿಗೂ ಶಕ್ತಿ ನೀಡಿದ್ದು, ನಾವೆಲ್ಲರೂ ಸೇರಿ ಕಾಂಗ್ರೆಸ್ಗೆ ಶಕ್ತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದರು.
![](https://zoomintv.online/wp-content/uploads/2024/02/IMG-20240211-WA0047-1024x461.jpg)
ಅವರು ಉದಯಗಿರಿ ಭಾಗೀರಥಿ ಸಭಾಭವನದಲ್ಲಿ ಮಂಗಳೂರಿನ ಸಹ್ಯಾದ್ರಿ ಮೈದಾನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೃಹತ್ ಕಾಂಗ್ರೆಸ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದ ಬಳಿಕ ಇಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಕೆಎಂಎಫ್, ಮೆಡಿಕಲ್ ಕಾಲೇಜು, ಪುತ್ತೂರು ನಗರಕ್ಕೆ ಚರಂಡಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 1010 ಕೋಟಿ ರೂ. ಮಂಜೂರು, ಬಿರುಮಲೆ ಬೆಟ್ಟದ ಅಭಿವೃದ್ದಿಗೆ 2 ಕೋಟಿ ಮಂಜೂರಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವ ದೇವಸ್ಥಾನದ ಅಭಿವೃದ್ದಿಗೆ ಅನುದಾನ, ಸೇರಿದಂತೆ ಬೃಹತ್ ಅನುದಾನದ ಯೋಜನೆಗಳು ಮಂಜೂರಾಗಿದೆ. ಅಡಿಕೆ ಬೆಳೆಗಾರರಿಗೆ ವಿಮೆ ಮಂಜೂರು ಸೇರಿದಂತೆ ಅನೇಕ ಯೋಜನೆಗಳು ಮುಂದೆ ನಡೆಯಲಿದ್ದು, ಪುತ್ತೂರು ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿಯಾಗಲಿದೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅನುದಾನದ ಹೊಳೇಯೇ ಹರಿದು ಬರುತ್ತಿದೆ. ಗೃಹಲಕ್ಷ್ಮೀ ಯೋಜನೆಯಿಂದ ಎಲ್ಲರ ಖಾತೆಗೂ ಹಣ ಜಮೆಯಾಗುತ್ತಿದೆ ಇದೆಲ್ಲವನ್ನೂ ಕೊಟ್ಟದ್ದು ಕಾಂಗ್ರೆಸ್ ಸರಕಾರವಾಗಿದೆ. ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಿದ್ದು, ಫೆ.17 ರಂದು ನಡೆಯುವ ರಾಜ್ಯಮಟ್ಟದ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಸಶ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
![](https://zoomintv.online/wp-content/uploads/2024/02/IMG-20240211-WA0046-1024x461.jpg)
ಜನತೆ ಕಾಂಗ್ರೆಸ್ಗೆ ಶಕ್ತಿ ತುಂಬುವ ಕೆಲಸ ಮಾಡಿದರೆ ಸರಕಾರ ಕೂಡಾ ಜನತೆಗೆ ಶಕ್ತಿ ನೀಡುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತದೆ ಎಂದು ಹೇಳಿದರು.
![](https://zoomintv.online/wp-content/uploads/2024/02/IMG-20240211-WA0049-1024x461.jpg)
ವಲಯ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ
ವಲಯ ಮತ್ತು ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡಬೇಕಿದೆ. ಪ್ರತೀ ವಲಯ ಅಧ್ಯಕ್ಷರುಗಳಿಗೆ ತಲಾ 20 ಲಕ್ಷ ಅನುದಾನವನ್ನು ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗ್ರಾಮದಲ್ಲಿ ಅತೀ ಅಗತ್ಯವಿರುವ ಕಾಮಗಾರಿಯನ್ನು ಗುರುತಿಸಿ ಅದನ್ನು ಅಭಿವೃದ್ದಿ ಮಾಡುವ ಜವಾಬ್ದಾರಿಯನ್ನು ವಲಯ ಮತ್ತು ಬೂತ್ ಸಮಿತಿಗಳಿಗೆ ನೀಡಲಾಗಿದೆ. ವಲಯ ಮತ್ತು ಬೂತ್ ಅಧ್ಯಕ್ಷರ ಅನುಮೋದನೆಯೊಂದಿಗೆ ಪ್ರತೀಯೊಂದು ಕಾಮಗಾರಿಯೂ ನಡೆಯಲಿದ್ದು, ವಲಯ ಮತ್ತು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಪುತ್ತೂರಿನಲ್ಲಿ ವಿರೋಧ ಪಕ್ಷದವರಿಗೆ ಮಾತನಡಲು ವಿಷಯವೇ ಇಲ್ಲದಂತಾಗಿದೆ. ಹಿಂದೆಗಿಂತ ಹೆಚ್ಚು ಅಭಿವೃದ್ದಿ ಕೆಲಸಗಳು ನಡೆಯುತ್ತಿರುವುದನ್ನು ಅವರು ಕಾಣುತ್ತಿದ್ದು ಏನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಶಾಸಕರು ಹೇಳಿದರು.
ಕಾರ್ಯಕ್ರಮ ಯಶಸ್ವಿಗೊಳಿಸಿ : ಎಂ ಬಿ ವಿಶ್ವನಾಥ ರೈ
ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ಫೆ.17 ರಂದು ನಡೆಯುವ ಕಾಂಗ್ರೆಸ್ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದರೂ ಹೈಕಮಾಂಡ್ ಮಂಗಳೂರಿನಲ್ಲೇ ಸಮಾವೇಶವನ್ನು ಆಯೋಜನೆ ಮಾಡಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಗತ ವೈಭವವನ್ನು ಮರಳಿ ತರಲು ಕಾರ್ಯಕರ್ತರ ಶ್ರಮ ಅತೀ ಅಗತ್ಯವಾಗಿದೆ. ಕಾರ್ಯಕ್ರಮಕ್ಕೆ ತೆರಳುವಲ್ಲಿ ಎಲ್ಲಾ ಗ್ರಾಮಗಳಿಂದಲೂ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
40 ಬಸ್ ವ್ಯವಸ್ಥೆ
ಕಾರ್ಯಕ್ರಮಕ್ಕೆ ಒಟ್ಟು 40 ಬಸ್ ವ್ಯವಸ್ಥೆ ಇದ್ದು,ಬೈಪಾಸ್ ಬಳಿ ಇರುವ ರೈ ಎಸ್ಟೇಟ್ ಕಚೇರಿಯಿಂದ ಬಸ್ ಹೊರಡಲಿದೆ. ಎಲ್ಲಾ ಗ್ರಾಮಗಳಿಂದ ಬರುವ ಬಸ್ಸುಗಳು ಮತ್ತು ಕಾರ್ಯಕರ್ತರ ಖಾಸಗಿ ವಾಹನಗಳು ಸೇರಿ ಒಟ್ಟಾಗಿ ಪುತ್ತೂರಿನಿಂದ ಹೊರಡಲಿದೆ. ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿಯವರು ಮಾತನಾಡಿ, ರಾಜ್ಯ ಮಟ್ಟದ ಸಮಾವೇಶ ಮಂಗಳೂರಿನಲ್ಲಿ ನಡೆಯುತ್ತಿರುವುದು ಅಭಿಮಾನದ ವಿಚಾರವಾಗಿದೆ. ಕಾರ್ಯಕ್ರಮ ಇತಿಹಾಸದಲ್ಲಿ ದಾಖಲೆಯಾಗಬೇಕು. ಪ್ರತೀ ಬೂತ್ ನಿಂದಲೂ ಕಾರ್ಯಕರ್ತರು ತೆರಳಲಿದ್ದು, ಪುತ್ತೂರಿನ ಕಾಂಗ್ರೆಸ್ ಶಕ್ತಿಯನ್ನು ನಾವು ಪ್ರದರ್ಶಿಸಬೇಕು ಎಂದು ಹೇಳಿದರು.
ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮನೆ ಮನೆಗೂ ತಿಳಿಸಿ – ಎಂ ಎಸ್ ಮಹಮ್ಮದ್
ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ರವರು ಮಾತನಾಡಿ, ಮಂಗಳೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶ ಪ್ರತೀ ಮನೆಗೂ ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಸಮಾವೇಶವನ್ನು ಯಶಸ್ವಿಗೊಳಿಸಿ.ಪಕ್ಷದ ಜವಾಬ್ದಾರಿ ಮತ್ತು ಇತರೆ ಜವಾಬ್ದಾರಿ ಹೊತ್ತುಕೊಂಡ ಕಾರ್ಯಕರ್ತರು ಪಕ್ಷಕ್ಕಾಗಿ ಹೆಚ್ಚು ಕೆಲಸಮಾಡುವ ಮೂಲಕ ಪಕ್ಷದ ಋಣ ತೀರಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಕಾರ್ಯವೈಖರಿ ಬಗ್ಹೆ ಸಿದ್ದರಾಮಯ್ಯ ಅವರಿಗೂ ತೃಪ್ತಿ ಇದೆ. ದಿನ 18 ಗಂಟೆ ಕಾರ್ಯಕರ್ತರಿಗಾಗಿ ಮೀಸಲಿಡುವ ರಾಜ್ಯದ ಏಕೈಕ ಶಾಸಕರಾಗಿದ್ದಾರೆ. ಕ್ಷೇತ್ರದ ಜನತೆಗಾಗಿ, ಕ್ಷೇತ್ರದ ಅಭಿವೃದ್ದಿಗಾಗಿ ವಾರದಲ್ಲಿ ಎರಡು ದಿನ ಬೆಂಗಳೂರಿನ ವಿಧಾನಸೌಧದಲ್ಲೇ ಠಿಕಾಣಿ ಹೂಡುತ್ತಿದ್ದು, ಇಂತಹ ಶಾಸಕರು ನಮಗೆ ದೊರೆತಿರುವುದು ಸೌಭಾಗ್ಯ ಎಂದು ಹೇಳಿದರು.
ಶಾಸಕರಿಗೆ ಶಕ್ತಿನೀಡುವ ಕೆಲಸ ಮಾಡಬೇಕಿದೆ -ಕಾವು ಹೇಮನಾಥ ಶೆಟ್ಟಿ
ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಕಾರ್ಯವೈಖರಿ ಇಂದು ಪ್ರತೀಯೊಬ್ಬ ಕಾರ್ಯಕರ್ತರಿಗೂ ಗೊತ್ತಿದೆ. ವಲಯ ಮತ್ತು ಬೂತ್ ಅಧ್ಯಕ್ಷರ ಗಮನಕ್ಕೆ ಬಾರದೆ ಯಾವುದೇ ಕಾಮಗಾರಿಗೆ ಚಾಲನೆ ನೀಡುವುದಿಲ್ಲ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಯಕರ್ತರಿಗೆ ಈ ಗೌರವ ದೊರಕುತ್ತಿದೆ ಇದು ಉತ್ತಮ ಬೆಳವಣಿಗೆಯಾಗಿದೆ. ಚುನಾವಣೆ ಪೂರ್ವದಲ್ಲೂ ಬಡವರ ಪರವಾಗಿ ಕೆಲಸ ಮಾಡುತ್ತಿದ್ದ ಶಾಸಕರು ಶಾಸಕರಾದ ಬಳಿಕವೂ ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತೀಯೊಂದು ಮನೆಗೂ ರಾಜ್ಯದ ಕಾಂಗ್ರೆಸ್ ಸರಕಾರದ ಯೋಜನೆ ತಲುಪಿದೆ. ಎಲ್ಲರ ಖಾತೆಗೂ ಗೃಹಲಕ್ಷ್ಮೀ ಯೋಜನೆ ಬಂದಿದೆ, ಕರೆಂಟ್ ಬಿಲ್ ಫ್ರೀಯಾಗಿದೆ ಈ ಎಲ್ಲಾ ಕಾರಣಕ್ಕೆ ಮನೆಯ ಪ್ರತೀಯೊಬ್ಬ ಸದಸ್ಯನೂ ಸಮಾವೇಶದಲ್ಲಿಭಾಗವಹಿಸುವ ಮೂಲಕ ಕಾಂಗ್ರೆಸ್ ಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರಕಾರಕ್ಕೆ ಶಕ್ತಿತುಂಬುವ ಕೆಲಸ ಮಾಡಿದರೆ ಗ್ಯಾರಂಟಿ ಯೋಜನೆಗೆ ಬೆಂಬಲ ನೀಡಿದಂತಾಗುತ್ತದೆ. ಪುತ್ತೂರಿನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿದೆ. ಕುಡಿಯುವ ನೀರಿಗಾಗಿ 1010 ಕೋಟಿ, ಕೆಎಂಎಫ್ , ಮೆಡಿಕಲ್ ಕಾಲೇಜು, ಮಾಣಿ ಸಂಪಾಜೆ ಚತುಷ್ಪಥ ರಸ್ತೆ ಇದೆಲ್ಲವೂ ಪುತ್ತೂರು ಶಾಸಕರ ಸಾಧನೆಯಾಗಿದೆ. ಶಾಸಕರು ಮಾಡುವ ಉತ್ತಮ ಕೆಲಸಕ್ಕೆ ನಾವು ಬೆಂಬಲ ನೀಡುವ ಉದ್ದೇಶದಿಂದ ನಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯತೆ ಇದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು.
ವೇದಿಕೆಯಲ್ಲಿ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂಡಿಸೋಜಾ, ಕೆಪಿಸಿಸಿ ಸದಸ್ಯರಾದ ಪ್ರಸಾದ್ ಕೌಶಲ್ ಶೆಟ್ಟಿ ಮತ್ತು ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಉಪಸ್ಥಿತರಿದ್ದರು.
ಕೆಪಿಸಿಸಿ ವಕ್ತಾರರಾದ ಅಮಲರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.