ರಾಜಸ್ತಾನ: ಕಾರನ್ನು ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ವೈದ್ಯ
ದಂಪತಿಯನ್ನು ಇಬ್ಬರು ಯುವಕರು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶ್ರೀರಾಮ್ ಆಸ್ಪತ್ರೆಯ ನಿರ್ದೇಶಕ ಡಾ.ಸುದೀಪ್ ಗುಪ್ತಾ
ಹಾಗೂ ಆತನ ಪತ್ನಿ ಡಾ.ಸೀಮಾ ಗುಪ್ತಾ ತಮ್ಮ ಕಾರಿನಲ್ಲಿ ಹಿರಾಡಾಸ್ ಕಡೆಗೆ ಶುಕ್ರವಾರ ಸಂಜೆ ಕಾಳಿ ಬಾಗ್ಚಿ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ನಡು ರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ ಐದು ಬಾರಿ ಗುಂಡು ಹಾರಿಸಿ ದಂಪತಿಯನ್ನು ಹತ್ಯೆ ಮಾಡಿದ್ದರು.
ಇದೀಗ ಆರೋಪಿಗಳನ್ನು ಪೊಲೀಸರು ೨೪ ಗಂಟೆಯೊಳಗೆ ಪತ್ತೆ ಮಾಡಿದ್ದು, ಆರೋಪಿಗಳ ಪತ್ತೆಯ ಹಿಂದೆಯೇ
ಕರುಣಾಜನಕ ಕಥೆಯೊಂದು ಬಯಲಾಗಿದೆ. ಹತ್ಯೆಗೀಡಾಗಿದ್ದ ವೈದ್ಯ ದಂಪತಿ ತಮ್ಮ ಸುಖ ಸಂಸಾರಕ್ಕಾಗಿ ಮಹಿಳೆ ಹಾಗೂ ಆಕೆಯ ಪುಟ್ಟ ಮಗುವನ್ನು ಸುಟ್ಟು ಭಸ್ಮ ಮಾಡಿದ್ದು,
ಇದೀಗ ಈ ಸೇಡನ್ನು ಮಹಿಳೆಯ ಅಣ್ಣ ತೀರಿಸಿದ್ದು, ನಡುರಸ್ತೆಯಲ್ಲಿ ದಂಪತಿಯನ್ನು ಗುಂಡಿಟ್ಟು ಹತ್ಯೆ
ಮಾಡಿದ್ದಾನೆ.
ಡಾ.ಸುದೀಪ್ ಒಬ್ಬ ಸ್ತ್ರೀ ಚಪಲನಾಗಿದ್ದು, ಆತನಿಗೆ ತನ್ನ ಕ್ಲಿನಿಕ್ ನಲ್ಲಿರುವ ಮಹಿಳೆಯೊಂದಿಗೆ ಅಕ್ರಮ
ಸಂಬಂಧ ಇದೆ ಎಂದು ಪತ್ನಿ ಸೀಮಾಗೆ ಅನುಮಾನ ಇತ್ತು. ಆ ಮಹಿಳೆ ಸೂರ್ಯ ಪೊಶ್ ನಗರದಲ್ಲಿ ವಾಸವಿದ್ದು, ಆಕೆಗೆ ೬ ವರ್ಷದ ಮಗ ಕೂಡಾ ಇದ್ದ. ೨೦೧೯ರಲ್ಲಿ ಡಾ.ಸೀಮಾ
ತನ್ನ ಅತ್ತೆಯ ಜೊತೆಗೆ ಮಹಿಳೆಯ ಮನೆಗೆ ಹೋಗಿದ್ದು, ಮನೆಯ ಹೊರಗಿನಿಂದ ಬೀಗ ಹಾಕಿ ಮನೆಗೆ ಬೆಂಕಿ ಹಚ್ಚಿದ್ದರು. ಮನೆಯೊಳಗಿದ್ದ ಮಹಿಳೆ ಹಾಗೂ ಆಕೆಯ ಪುತ್ರ
ಬೆಂಕಿಯಲ್ಲಿ ದಹಿಸಿ ಸಾವನ್ನಪ್ಪಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಸುದೀಪ್ ಹಾಗೂ ಡಾ.ಸೀಮಾ ಜೈಲು ಪಾಲಾಗಿದ್ದರು. ಮೊದಲಿಗೆ ಈ
ಕೃತ್ಯದಲ್ಲಿ ಕೇವಲ ಸೀಮಾಳ ಪಾತ್ರ ಮಾತ್ರಯಿದೆ ಎನ್ನುವ ಅನುಮಾನ ಇತ್ತು. ಆದರೆ ಆ ಬಳಿಕ ಡಾ.ಸುದೀಪ್
ಈ ಪ್ಲಾನ್ನಲ್ಲಿ ಸೇರಿದ್ದ ಎಂದು ತಿಳಿದು ಬಂದಿತ್ತು. ಜೈಲಿನಿಂದ ಹೊರ ಬಂದ ಬಳಿಕ ಈ ಪ್ರಕರಣ ಇಲ್ಲಿಗೆ ಮುಕ್ತಾಯ ವಾಯಿತು ಎಂದು ನೆಮ್ಮದಿಯಲ್ಲಿ ವೈದ್ಯ
ದಂಪತಿ ತಿರುಗಾಡುತ್ತಿದ್ದರು. ಆದರೆ ಇತ್ತ ತನ್ನ ತಂಗಿ ಹಾಗೂ ಆಕೆಯ ಪುಟ್ಟ ಮಗನನ್ನು ಸುಟ್ಟುಕೊಂದಿದ್ದ
ಪಾಪಿಗಳಿಗಾಗಿ ಆಕೆಯ ಸಹೋದರ ಅನೂಜ್ ಹೊಂಚು ಹಾಕುತ್ತಿದ್ದನು. ಹಲವು ದಿನಗಳಿಂದಲೂ ದಂಪತಿಯ
ಹಿಂದೆ ಬಿದ್ದಿದ್ದ ಅನೂಜ್ ಅವರ ಚಲನವಲನಗಳನ್ನು ಗಮನಿಸುತ್ತಿದ್ದನು. ಅಂತೂ ಶುಕ್ರವಾರ ಮಧ್ಯಾಹ್ನದ ವೇಳೆಗೆ
ತನ್ನ ಸ್ನೇಹಿತ ಮಹೇಶ್ನೊಂದಿಗೆ ರಿವಾಲ್ವಾರ್ನೊಂದಿಗೆ ಬಂದ ಅನೂಜ್ ರಾಜಸ್ತಾನದ ಭರತ್ಪುರ ಬಳಿ ಕಾರನ್ನು
ಅಡ್ಡ ಹಾಕಿದ್ದಾನೆ. ಕಾರನ್ನು ಅಡ್ಡ ಹಾಕಿದವನೇ ನೇರವಾಗಿ ಪಿಸ್ತೂಲ್ ತೆಗೆದು ಡಾ.ಸುದೀಪ್ನ ತಲೆಗೆ
ಗುಂಡಿಟ್ಟಿದ್ದಾನೆ. ಆತನ ಪತ್ನಿ ಸೀಮಾಳ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಒಟ್ಟು ಐದು ಬಾರಿ ಗುಂಡು ಹಾರಿಸಿದರೂ ಅನೂಜ್ನ ಆಕ್ರೋಶ ತೀರಿರಲಿಲ್ಲ. ದಂಪತಿಯ ರಕ್ಷಣೆಗೆ ಅಲ್ಲಿ ನೆರೆದಿದ್ದ ಕೆಲವರು ಕಾರಿನ ಸಮೀಪ ಬರಲು ನೋಡುತ್ತಿದ್ದ ವೇಳೆ ಅನೂಜ್ ಅವರಿಗೂ ಪಿಸ್ತೂಲ್
ತೋರಿಸಿ ಸ್ಥಳದಿಂದ ಹೋಗುವಂತೆ ಹೇಳಿದ್ದಾನೆ.
ಇದೀಗ ಹತ್ಯೆ ಆರೋಪಿಗಳ ಗುರುತು ಪತ್ತೆ ಮಾಡಿರುವ ಪೊಲೀಸರು, ಆರೋಪಿಗಳ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಮುಂದಿನ ತನಿಖೆಯಲ್ಲಿ ಪ್ರಕರಣದ ಸತ್ಯಾಸತ್ಯತೆಗಳು ಬಯಲಾಗಬೇಕಿದೆ.