ಪುತ್ತೂರು ತಾಲೂಕಿನ ಪುಣಚ ಗ್ರಾಮದ ದೇವಿನಗರ ನಿವಾಸಿಗಳಾದ ಮೂರು ಪರಿಶಿಷ್ಟ ಪಂಗಡದ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡದ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ ಎಂದು ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬಂಟ್ವಾಳ ತಹಶೀಲ್ದಾರ್ ಸಂಬಂಧಿತ ಮೂರು ಕುಟುಂಬಗಳನ್ನು ಕಚೇರಿಗೆ ಕರೆಸಿ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದರಿಂದ ಅವರು ಬಂಟ್ವಾಳ ತಹಶೀಲ್ದಾರ್ ಕಚೇರಿಗೆ ತೆರಳಿದ್ದರು. ಆದರೆ ಬಳಿಕ ಹಕ್ಕುಪತ್ರ ವಿತರಣೆಗೆ ಆಕ್ಷೇಪಣೆ ಇರುವುದಾಗಿ ತಿಳಿಸಲಾಯಿತು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಗಿರಿಧರ್ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗಿದ್ದು, ಅದಕ್ಕೆ ಭಾರತೀಯ ಜನತಾ ಪಾರ್ಟಿ ನೈತಿಕ ಬೆಂಬಲ ನೀಡಿದೆ. ಬಡವರ ಹಕ್ಕುಗಳ ಪರ ನಿಲ್ಲುವುದು ಪಕ್ಷದ ಕರ್ತವ್ಯವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ನಡೆದಿರುವ ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡಿರುವುದನ್ನು ನೆಪವನ್ನಾಗಿ ಮಾಡಿಕೊಂಡು ಹಕ್ಕುಪತ್ರ ವಿತರಣೆಯಲ್ಲಿ ರಾಜಕೀಯ ಮಾಡಬಾರದು. ಮಾನ್ಯ ಶಾಸಕರು ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಅದರ ಶ್ರೇಯಸ್ಸನ್ನು ತಾವೇ ಪಡೆದುಕೊಳ್ಳಲಿ. ಬಿಜೆಪಿಗೆ ಯಾವುದೇ ಶ್ರೇಯಸ್ಸಿನ ಅಗತ್ಯವಿಲ್ಲ. ಬಡವರು ಹಕ್ಕುಪತ್ರ ಪಡೆದು ನೆಮ್ಮದಿಯ ಜೀವನ ನಡೆಸುವುದೇ ನಮ್ಮ ಉದ್ದೇಶ ಎಂದು ಹರಿಪ್ರಸಾದ್ ಯಾದವ್ ತಿಳಿಸಿದ್ದಾರೆ.
ಅದೇ ವೇಳೆ, ಬಡವರಿಗೆ ಹಕ್ಕುಪತ್ರ ನೀಡದೆ ದೇವಿನಗರದಲ್ಲಿರುವ ಸರ್ಕಾರಿ ಜಾಗವನ್ನು ಇತರರು ಕಬಳಿಸಲು ಪ್ರಯತ್ನಿಸಿದರೆ, ಭಾರತೀಯ ಜನತಾ ಪಾರ್ಟಿಯ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.




























