ಪುತ್ತೂರು: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ನೂಜಿಬರೆ ಮೇಲು ಮನೆಯ ನಿವಾಸಿ ರಂಜಿತ್ ಕುಮಾರ್ ರೈ ಅವರು 2026ನೇ ಸಾಲಿನ ಡಿ.ಜಿ ಮತ್ತು ಐ.ಜಿ.ಪಿ ಪ್ರಶಂಸನಾ ಪದಕಕ್ಕೆ ಆಯ್ಕೆಯಾಗಿದ್ದು, ಕುಟುಂಬದವರು ಹಾಗೂ ಊರಿನ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ರಂಜಿತ್ ಕುಮಾರ್ ರೈ ಅವರು ಗಣೇಶ್ ರೈ ಎನ್.ಬಿ. ಮತ್ತು ರತ್ನವತಿ ಜಿ. ದಂಪತಿಯ ಪುತ್ರರಾಗಿದ್ದಾರೆ. ಅವರ ಪತ್ನಿ ಕೃತಿ ಆರ್. ರೈ ಆಗಿದ್ದು, ಹೃದ್ಯಾಂಶ್ ಆರ್. ರೈ ಮತ್ತು ಮೇದಾಂಶ್ ಆರ್. ರೈ ಎಂಬ ಇಬ್ಬರು ಪುತ್ರರಿದ್ದಾರೆ.
2008ರಲ್ಲಿ ಮಂಗಳೂರು ಜಿಲ್ಲಾ ಸಶಸ್ತ್ರ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಅವರು ಸುಮಾರು 18 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಮಂಗಳೂರು ನಗರ ಪೊಲೀಸ್ ವ್ಯಾಪ್ತಿ, ಸುಳ್ಯ ವೃತ್ತ ಕಚೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸೇವೆಯಲ್ಲಿ ಶಿಸ್ತು, ಕರ್ತವ್ಯನಿಷ್ಠೆ ಹಾಗೂ ಕಾರ್ಯಕ್ಷಮತೆಯಿಂದ ಗುರುತಿಸಿಕೊಂಡಿರುವ ರಂಜಿತ್ ಕುಮಾರ್ ರೈ ಅವರು, ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕಾರ್ಯಕ್ಷಮತೆಯನ್ನು ಗುರುತಿಸಿ ಪಶ್ಚಿಮ ವಲಯ ಐ.ಜಿ.ಪಿ ಅವರಿಂದ ಪ್ರಶಂಸನಾ ಪುರಸ್ಕಾರವೂ ದೊರೆತಿದೆ.
ಈಗ ಡಿ.ಜಿ ಮತ್ತು ಐ.ಜಿ.ಪಿ ಪದಕಕ್ಕೆ ಆಯ್ಕೆಯಾಗಿರುವುದು ಅವರ ಪೊಲೀಸ್ ಸೇವೆಯಲ್ಲಿನ ಸಾಧನೆಗೆ ಮತ್ತೊಂದು ಗರಿ ಮೂಡಿಸಿದ್ದು, ಕುಟುಂಬದವರು, ಬಂಧು-ಬಳಗ, ಸ್ನೇಹಿತರು ಹಾಗೂ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



























