ಬಂಟ್ವಾಳ: ದನ ಮೇಯಲು ಹೋದ ವಿಷಯವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಅನಂತಾಡಿಯ ಬಾಬನಕಟ್ಟೆಯಲ್ಲಿ ಜೂ.30 ರಂದು ನಡೆದಿದೆ.
ಹಲ್ಲೆಗೊಳಗಾದವರನ್ನು ಬಾಬನಕಟ್ಟೆ ನಿವಾಸಿ ನೋಣಯ್ಯ ಪೂಜಾರಿ ಎಂದು ಗುರುತಿಸಲಾಗಿದೆ.
ನೋಣಯ್ಯ ಪೂಜಾರಿಯವರ ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿದ್ದ ಹಸು ಹಗ್ಗ ಗಿಚ್ಚಿಸಿಕೊಂಡು ಹೋಗಿ ಪಕ್ಕದ ಗುಡ್ಡದಲ್ಲಿ ಮೇಯುತ್ತಿದ್ದು, ಇದನ್ನು ಗಮನಿಸಿದ ನೋಣಯ್ಯ ಪೂಜಾರಿಯವರ ತಮ್ಮ ಚಂದಪ್ಪ ಪೂಜಾರಿ ಯವರು ಹಸುವಿಗೆ ಹೊಡೆದು ಅದನ್ನು ರಸ್ತೆಯಲ್ಲೇಲ್ಲ ಓಡಿಸಿಕೊಂಡು ಹೋಗಿದ್ದು, ಈ ವಿಷಯವನ್ನು ಯಾರೋ ಫೋನ್ ಮೂಲಕ ನೋಣಯ್ಯ ಪೂಜಾರಿಯವರಿಗೆ ವಿಷಯ ತಿಳಿಸಿದ್ದು, ಅವರು ದನವನ್ನು ಹುಡುಕಿಕೊಂಡು ಹೋದ ವೇಳೆ ಚಂದಪ್ಪ ಪೂಜಾರಿಯವರು ಅವರ ಕೈ ಯಲ್ಲಿದ್ದ ಹಗ್ಗವನ್ನು ನೋಣಯ್ಯ ಪೂಜಾರಿ ಯವರ ಕುತ್ತಿಗೆಗೆ ಹಾಕಿ ಬಿಗಿದಿದ್ದು ಹಾಗೂ ಕೈ ಯಲ್ಲಿದ್ದ ಕತ್ತಿಯಿಂದ ತಲೆಗೆ ಹಾಗೂ ಕಿವಿ ಭಾಗಕ್ಕೆ ಹಲ್ಲೆ ನಡೆಸಿದ್ದಾಗಿ ನೋಣಯ್ಯ ಪೂಜಾರಿಯವರು ಹೇಳಿದ್ದಾರೆ.
ನೋಣಯ್ಯ ಪೂಜಾರಿ ಯವರನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಾಣಾಂತಿಕ ಹಲ್ಲೆ ನಡೆಸಲಾಗಿದ್ದು, ಸ್ಥಳೀಯರು ಬೊಬ್ಬೆ ಹೊಡೆದು ಜಗಳವನ್ನು ಬಿಡಿಸಿದ್ದಾರೆಂದು ತಿಳಿದು ಬಂದಿದೆ. ಹಲ್ಲೆ ತಡೆಯಲು ಹೋದ ನೋಣಯ್ಯ ಪೂಜಾರಿಯವರ ಪತ್ನಿಗೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಗಾಯಗೊಂಡ ನೋಣಯ್ಯ ಪೂಜಾರಿಯವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಚಂದಪ್ಪ ಪೂಜಾರಿಯವರ ವಿರುದ್ಧ ವಿಟ್ಲ ಠಾಣೆಯಲ್ಲಿ ನೋಣಯ್ಯ ಪೂಜಾರಿಯವರು ದೂರು ನೀಡಿದ್ದಾರೆ.