ನಾಗರಪಂಚಮಿ ಇತಿಹಾಸ : ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ಪಂಚಮಿಯಾಗಿತ್ತು.
ನಾಗರಪಂಚಮಿ – ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ
ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ‘ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ.’ ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣ ವೆಂದರೆ ಪಂಚಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.
ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವ
೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ಕನಿಷ್ಠ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ. ನಾಗರಪಂಚಮಿಯ ಹಿಂದಿನ ದಿನ ಪ್ರತಿಯೊಬ್ಬ ಸಹೋದರಿಯು ದೇವರಲ್ಲಿ ಮೊರೆ ಇಡುವುದರಿಂದ ಅವಳ ಸಹೋದರನಿಗೆ ಲಾಭವಾಗುತ್ತದೆ ಮತ್ತು ಅವನ ರಕ್ಷಣೆಯಾಗುತ್ತದೆ.
ನಾಗನ ಪೂಜೆ ಮಾಡುವುದರ ಹಿಂದಿನ ಶಾಸ್ತ್ರ
ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಆಗ ಅವಳು ಆ ನಾಗರೂಪವನ್ನು ತನ್ನ ಸಹೋದರನೆಂದು ಭಾವಿಸಿದಳು. ಆಗ ನಾಗದೇವನು, ನನ್ನನ್ನು ಸಹೋದರನೆಂದು ಭಾವಿಸಿ ಪೂಜೆ ಮಾಡಿದ ಸಹೋದರಿಯ ರಕ್ಷಣೆಯನ್ನು ನಾನು ಮಾಡುವೆನು ಎಂದು ಅವಳಿಗೆ ವಚನ ನೀಡಿದನು. ಆದುದರಿಂದಲೇ ಆ ದಿನ ಪ್ರತಿಯೊಬ್ಬ ಸ್ತ್ರೀಯು ನಾಗನ ಪೂಜೆ ಮಾಡಿ ನಾಗರಪಂಚಮಿಯನ್ನು ಆಚರಿಸುತ್ತಾಳೆ.
ನಾಗನ ಮಹಾತ್ಮೆ:
೧. ‘ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ವಜ್ರವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಶಯನ ಮಾಡುತ್ತಾನೆ. ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ತೆಗೆದುಕೊಂಡಾಗ ಶೇಷನು ಲಕ್ಷ್ಮಣನ ಅವತಾರವನ್ನು ತೆಗೆದುಕೊಂಡಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.
೨. ‘ಶ್ರೀಕೃಷ್ಣನು ಯಮುನಾ ನದಿಯ ಆಳದಲ್ಲಿದ್ದ ಕಾಲಿಯಾ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು.
೩. ‘ನಾಗಗಳಲ್ಲಿನ ಶ್ರೇಷ್ಠನಾದ ‘ಅನಂತ’ನೇ ನಾನು’, ಎಂದು ಗೀತೆಯಲ್ಲಿ (೧೦.೨೯) ಶ್ರೀಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.
ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ||
ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯವಿರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.’
ಹಿಂದೂ ಪುರಾಣದ ಪ್ರಕಾರ ಬ್ರಹ್ಮ ದೇವರ ಪುತ್ರ ಋಷಿ ಕಶ್ಯಪನಿಗೆ ನಾಲ್ಕು ಮಂದಿ ಪತ್ನಿಯರಿದ್ದರು. ಮೊದಲ ಪತ್ನಿ ದೇವತೆಗಳನ್ನು ಎರಡನೇ ಪತ್ನಿ ಗರುಡನಿಗೆ, ನಾಲ್ಕನೇ ಪತ್ನಿಯು ದೈತರ(ರಾಕ್ಷಸರು)ನ್ನು ಭೂಮಿ ತಂದಳು ಎನ್ನುವ ನಂಬಿಕೆಯಿದೆ. ಮೂರನೇ ಪತ್ನಿ ಕದ್ರುಗೆ ನಾಗವಂಶದೊಂದಿಗೆ ಸಂಬಂಧವಿದ್ದ ಕಾರಣ ಆಕೆ ನಾಗಗಳನ್ನು ರೂಪಿಸಿದಳು.
- ಪುರಾಣಗಳ ಪ್ರಕಾರ ಎರಡು ರೀತಿಯ ನಾಗ ದೇವತೆಗಳು ಇವೆ. ದಿವ್ಯಾ ಮತ್ತು ಭುಮ. ವಾಸುಕಿ, ತಕ್ಷಕ ಇತ್ಯಾದಿಗಳು ದಿವ್ಯಾ ನಾಗವಂಶಕ್ಕೆ ಸೇರಿರುವುದು. ಇವರು ಭೂಮಿಯ ಭಾರವನ್ನು ಹೊತ್ತುಕೊಂಡಿರುವ ಅವುಗಳಲ್ಲಿ ಅಗ್ನಿಯಂತಹ ವರ್ಚಸ್ಸು ಇದೆ ಎಂದು ನಂಬಲಾಗಿದೆ. ಇವುಗಳು ಕ್ರೋಧಕ್ಕೆ ಒಳಗಾದರೆ ಆಗ ನಾಲಿಗೆ ಹೊರಹಾಕಿ ಬೆಂಕಿಯುಗುಳಿ ಎಲ್ಲವನ್ನು ಭಸ್ಮ ಮಾಡುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಇವುಗಳ ವಿಷಕ್ಕೆ ಯಾವುದೇ ಮದ್ದಿಲ್ಲವೆನ್ನಲಾಗುತ್ತದೆ. ದವಡೆಯಲ್ಲಿ ವಿಷ ಹೊಂದಿರುವ 80 ಹಾವುಗಳು ಭೂಮಿ ಮೇಲಿದೆ ಎನ್ನಲಾಗುತ್ತದೆ.
- 8 ನಾಗಗಳಾದ ಅನಂತ, ವಾಸುಕಿ, ತಕ್ಷಕ, ಕಾರ್ಕೋಟಕ, ಐರಾವತ, ಮಹಾಪದ್ಮ, ಶಂಖಪಾಲ ಮತ್ತು ಕುಲಿಕ ಎಲ್ಲಾ ಹಾವುಗಳಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇವುಗಳಲ್ಲಿ ಎರಡು ಹಾವುಗಳು ಬ್ರಾಹ್ಮಣ, ಎರಡು ಹಾವುಗಳು ಕ್ಷತ್ರಿಯ ಮತ್ತು ಎರಡು ಹಾವುಗಳು ವೈಶ್ಯ ಮತ್ತು ಎರಡು ಶೂದ್ರ ಎಂದು ಪರಿಗಣಿಸಲಾಗಿದೆ. ಅನಂತ ಮತ್ತು ಕುಲಿಕ ಬ್ರಾಹ್ಮಣ ಹಾವುಗಳು, ವಾಸುಕಿ ಮತ್ತು ಶಂಖಪಾಲ ಕ್ಷತ್ರಿಯ, ತಕ್ಷಕ ಮತ್ತು ಮಹಾಪದ್ಮ ಹಾವುಗಳು ವೈಶ್ಯ, ಪದ್ಮ ಮತ್ತು ಕಾರ್ಕೋಟಕ ಶೂದ್ರ ಎಂದು ನಂಬಲಾಗಿದೆ.
- ಅರ್ಜುನನ ಮೊಮ್ಮಗ ಮತ್ತು ಪರೀಕ್ಷಿತನ ಮಗನಾಗಿರುವ ಜನಮೇಜಯ ನಾಗಗಳ ವಿರುದ್ಧ ಸೇಡು ತೀರಿಸಲು ಮತ್ತು ಅವುಗಳ ವಂಶವನ್ನು ನಾಶ ಮಾಡಲು ನಾಗಯಜ್ಞವನ್ನು ಆಯೋಜಿಸಿದ. ತಕ್ಷಕನು ಪರೀಕ್ಷಿತನನ್ನು ಕೊಂದಿರುವುದೇ ಜನಮೇಜಯನ ಕೋಪಕ್ಕೆ ಕಾರಣವಾಗಿತ್ತು. ನಾಗಗಳ ರಕ್ಷಣೆ ಮಾಡಲು ಋಷಿ ಜಾರತಕುವಿನ ಮಗ ಅಸ್ತಿಕ ಮುನಿಯು ಯಜ್ಞವನ್ನು ನಿಲ್ಲಿಸಿದ. ಈ ಯಜ್ಞವನ್ನು ನಿಲ್ಲಿಸಿದ ದಿನವೇ ಶ್ರಾವಣ ಶುಕ್ಲ ಪಕ್ಷದ ಪಂಚಮಿಯಾಗಿತ್ತು. ತಕ್ಷಕ ಮತ್ತು ಆತನ ವಂಶವನ್ನು ಅಸ್ತಿಕ ಮುನಿ ಕಾಪಾಡಿದ. ಈ ದಿನದಿಂದ ಜನರು ನಾಗರಪಂಚಮಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದು ನಂಬಲಾಗಿದೆ.
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ದೈವೀ ಕಣಗಳು (ಚೈತನ್ಯಕಣಗಳು).
ಭಾವಾರ್ಥ: ‘ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕಾಗಿ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಕೋನವನ್ನಿಡಲು ಕಲಿಯುವುದಿರುತ್ತದೆ.’
ಹಿಂದೂಗಳಿಗೆ ನಾಗರ ಪಂಚಮಿ ಬಂತೆಂದರೆ ಇನ್ನು ಹಬ್ಬಗಳ ಸುಗ್ಗಿ ಶುರು ಎನ್ನಬಹುದು. ಯಾಕೆಂದರೆ ಮೊದಲಾಗಿ ಬರುವುದು ನಾಗರ ಪಂಚಮಿ. ಇದರ ಬಳಿಕ ಒಂದೊಂದೇ ಹಬ್ಬಗಳು ವರ್ಷಾಂತ್ಯದ ತನಕ ಬರುವುದು. ಕರ್ನಾಟಕ ಸಹಿತ ಕೆಲವೊಂದು ರಾಜ್ಯಗಳಲ್ಲಿ ನಾಗರಪಂಚಮಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ನಾಗರಪಂಚಮಿಯನ್ನು ವಿವಿಧ ರೀತಿಯಿಂದ ಆಚರಿಸಲಾಗುತ್ತದೆ. ನಾಗನ ಕಲ್ಲಿಗೆ ಹಾಲೆರೆಯುವುದು, ಉಪವಾಸ ವ್ರತ ಮಾಡುವುದು ಇತ್ಯಾದಿಗಳು ನಾಗರಪಂಚಮಿ ಆಚರಣೆಯಲ್ಲಿ ಪ್ರಮುಖವಾಗಿರುವಂತದ್ದಾಗಿದೆ. ಶ್ರಾವಣ ಮಾಸದ ಪ್ರಕಾಶರ್ಧಮಾನದ ಐದನೇ ದಿನದಂದು ನಾಗರಪಂಚಮಿ ಬರುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಪಂಚಾಂಗದ ಪ್ರಕಾರ ಪಂಚಮಿ ತಿಥಿಯ ದೇವರು ನಾಗ. ಈ ದಿನದಂದು ನಾಗಗಳನ್ನು ಆರಾಧಿಸಲಾಗುವುದು….
ನಾಗರ ಪಂಚಮಿಯ ಮುಹೂರ್ತ:
• ನಾಗರ ಪಂಚಮಿಯನ್ನು ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುವುದು.
• ಪಂಚಮಿಯಂದು ಮೂರು ಮುಹೂರ್ತಕ್ಕಿಂತ ಕಡಿಮೆಯಿದ್ದರೆ ಮತ್ತು ಚತುರ್ಥಿಯಂದು ಕೂಡ ಮೂರಕ್ಕಿಂತ ಕಡಿಮೆ ಮುಹೂರ್ತವಿದ್ದರೆ ಆಗ ವ್ರತವನ್ನು ಚತುರ್ಥಿಯಂದು ಆಚರಿಸಬೇಕು.
• ಚತುರ್ಥಿಯಂದು ಮೂರಕ್ಕಿಂತ ಹೆಚ್ಚಿನ ಮುಹೂರ್ತವಿದ್ದರೆ, ಆಗ ಪಂಚಮಿಯು ಮರುದಿನ ಎರಡು ಮುಹೂರ್ತಗಳ ಕೊನೆಗೊಂಡ ಬಳಿಕ ಆರಂಭವಾಗುವುದು. ಇದರಿಂದ ಮರುದಿನ ಉಪವಾಸ ಮಾಡಬೇಕು.
ನಾಗರ ಪಂಚಮಿ ಉಪವಾಸ ಮತ್ತು ಪೂಜಾ ವಿಧಿ:
- ಅಷ್ಟ ನಾಗದೇವತೆಗಳನ್ನು ಈ ದಿನದ ದೇವರೆಂದು ಪರಿಗಣಿಸಲಾಗಿದೆ. ಇದರಿಂದ ಈ ದಿನ ಆ ಎಲ್ಲಾ ನಾಗಗಳನ್ನು ಪೂಜಿಸಬೇಕು. ಆ ನಾಗದೇವತೆಗಳ ಹೆಸರುಗಳು ಅನಂತ, ವಾಸುಕಿ, ಐರಾವತ, ಮಹಾಪದ್ಮ, ತಕ್ಷಕ, ಕುಳಿಕ ಕಾರ್ಕೋಟಕ ಮತ್ತು ಶಂಖಪಾಲ
- ಚತುರ್ಥಿಯಂದು ಒಂದು ಹೊತ್ತು ಊಟ ಮಾಡಿ ಮತ್ತು ಪಂಚಮಿಯಂದು ಉಪವಾಸ ಮಾಡಿ. ಪಂಚಮಿಯಂದು ಉಪವಾಸ ಬಿಟ್ಟ ಬಳಿಕ ರಾತ್ರಿ ಊಟ ಮಾಡಿ.
- ಪೂಜೆ ಮಾಡಲು ನಾಗದೇವರ ಚಿತ್ರ ಅಥವಾ ಮಣ್ಣಿನಿಂದ ಮಾಡಿದ ನಾಗನ ಮೂರ್ತಿಯನ್ನು ಮಣ್ಣಿನ ಬೆಂಚಿನ ಮೇಲಿಡಿ.
- ಅರಶಿನ, ಕುಂಕುಮ, ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸಿ.
- ಇದರ ಬಳಿಕ ಹಸಿಹಾಲು, ತುಪ್ಪ, ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸಿ.
- ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗಿ.
- ಹಾವಾಡಿಗರಿಗೆ ದಾನ ಮಾಡಬಹುದು ಮತ್ತು ಹಾಲಿನ ಮಿಶ್ರಣ ನೀಡಬಹುದು.
- ಪೂಜೆಯ ಅಂತ್ಯದಲ್ಲಿ ನೀವು ನಾಗ ಪಂಚಮಿ ಕಥೆ ಕೇಳಿ.
ಸೂಚನೆ:
ಸಂಪ್ರದಾಯದ ಪ್ರಕಾರ ನಾಗರ ಪಂಚಮಿಯನ್ನು ಚೈತ್ರಶುಕ್ಲ ಪಂಚಮಿ ಅಥವಾ ಭಾದ್ರಪದ ಶುಕ್ಲ ಪಂಚಮಿಯಂದು ಕೆಲವೊಂದು ಕಡೆಗಳಲ್ಲಿ ಆಚರಿಸಲಾಗುತ್ತದೆ. ಆಚರಣೆಗಳು ಒಂದು ಕಡೆಯಿಂದ ಮತ್ತೊಂದು ಕಡೆ ಭಿನ್ನವಾಗಿರುವುದರಿಂದಾಗಿ ಕೆಲವೊಂದು ಕಡೆಗಳಲ್ಲಿ ಕೃಷ್ಣ ಪಂಚಮಿಯಂದು ಕೂಡ ಇದನ್ನು ಆಚರಿಸಲಾಗುವುದು.
ನಾಗರ ಪಂಚಮಿಯ ಮಹತ್ವ:
- ಪ್ರಾಚೀನ ಕಾಲದಿಂದಲೂ ಹಾವುಗಳನ್ನು ಪೂಜಿಸಿಕೊಂಡು ಬರಲಾಗುತ್ತಿದೆ ಎಂದು ಹಿಂದೂಗಳ ನಂಬಿಕೆಯಾಗಿದೆ. ಇದರಿಂದ ನಾಗರ ಪಂಚಮಿಯ ದಿನದಂದು ನಾಗ ಪೂಜೆಯು ಮಹತ್ವದ್ದಾಗಿದೆ.
- ಈ ದಿನ ನಾಗದೇವರನ್ನು ಪೂಜಿಸುವವರಿಗೆ ಹಾವುಗಳ ಬಗ್ಗೆ ಭೀತಿಯಿರುವುದಿಲ್ಲವೆಂದು ನಂಬಲಾಗಿದೆ.
- ಸ್ನಾನ ಮಾಡಿಕೊಂಡು ಶುದ್ಧರಾಗಿ ಹಾವುಗಳಿಗೆ ಹಾಲು ನೀಡಿ, ಅವುಗಳನ್ನು ಪೂಜಿಸುವುದರಿಂದ ದೇವರ ಆಶೀರ್ವಾದವು ಸಿಗುವುದು ಎಂದು ನಂಬಲಾಗಿದೆ.
ನಾಗರಪಂಚಮಿ ಹಬ್ಬದ ಶುಭಾಶಯಗಳು… 🙏🙏