ಬೆಳ್ತಂಗಡಿ: ಮರೋಡಿ ಗ್ರಾಮದ ಪಲಾರಗೋಳಿ ನಿವಾಸಿ, ಭಜರಂಗದಳ ವೇಣೂರು ಪ್ರಖಂಡದ ಸಂಚಾಲಕರಾಗಿದ್ದ ರಾಮ್ ಪ್ರಸಾದ್ ಮರೋಡಿ (37.ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.13 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.
ಭಜರಂಗದಳ ವೇಣೂರು ಪ್ರಖಂಡದ ಸಂಚಾಲಕರಾಗಿದ್ದ ರಾಮ್ ಪ್ರಸಾದ್ ರವರು ಪಲಾರಗೋಳಿ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಪುತ್ತೂರು ಜಿಲ್ಲಾ ಭಜರಂಗದಳದ ಸಹ ಗೋರಕ್ಷಾ ಪ್ರಮುಖ್ ಕೂಡ ಆಗಿದ್ದರು. ಎಲ್ಲರ ಪ್ರೀತಿ ಪಾತ್ರರಾಗಿದ್ದರು.
ಮೃತರು ತಂದೆ ಶ್ರೀಧರ ಪೂಜಾರಿ, ತಾಯಿ ವಸಂತಿ, ಪತ್ನಿ, ಡಿಸಿಸಿ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿರುವ ಬಬಿತಾ, ಓರ್ವ ಪುತ್ರಿ, ಓರ್ವ ಸಹೋದರಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.