ಪುತ್ತೂರು: ತುಳುನಾಡಿನ ವೀರ ಪುರುಷರು ಎಂದು ಕರೆಯುವ ಕೋಟಿ- ಚೆನ್ನಯರು ಹಾಗೂ ದೇವಿ ಬೈದೇತಿ ಮೂಲಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲೀಗ ನವರಾತ್ರಿ ಉತ್ಸವದ ಸಂಭ್ರಮ ಮನೆಮಾಡಿದೆ. ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ನವರಾತ್ರಿ ಉತ್ಸವವನ್ನು ಆಯೋಜಿಸಲಾಗಿದ್ದು, ಕ್ಷೇತ್ರಕ್ಕೆ ಭಕ್ತರು ಅಪಾರ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ನವೀಕರಣಗೊಂಡಿದ್ದ ಗೆಜ್ಜೆಗಿರಿ ಕ್ಷೇತ್ರ ಅತ್ಯಂತ ಕಡಿಮೆ ಸಮಯದಲ್ಲಿಯೇ ತುಳುನಾಡಿನ ಪ್ರಸಿದ್ದ ಪುಣ್ಯಕ್ಷೇತ್ರವಾಗಿ ಹೊರಹೊಮ್ಮಿದೆ. ಕ್ಷೇತ್ರಕ್ಕೆ ವರ್ಷಂಪ್ರತಿ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಬ್ರಹ್ಮಕಲಶೋತ್ಸವವನ್ನು ಅದ್ದೂರಿಯಾಗಿಯೇ ಆಚರಿಸಲಾಗಿತ್ತು. ಆದರೇ ಇದೀಗ ಕ್ಷೇತ್ರದಲ್ಲಿ ಮೊದಲ ಬಾರಿಗೆ ನವರಾತ್ರಿಯ ಉತ್ಸವವನ್ನು ಆಚರಿಸಲಾಗುತ್ತಿದೆ.
ನಿತ್ಯವೂ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ. ನಿತ್ಯವೂ ಧಾರ್ಮಿಕ ಕೈಂಕರ್ಯಗಳು ನೆರವೇರುತ್ತಿದ್ದು, ಭಕ್ತರ ಆಗಮನಕ್ಕೆ ಕ್ಷೇತ್ರದ ಆಡಳಿತ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲು, ನವರಾತ್ರಿ ಉತ್ಸವಕ್ಕೆ ನೂರಾರು ಭಕ್ತರು ಸೇವೆಯನ್ನು ಒದಗಿಸಲು ಬೇಡಿಕೆಯನ್ನು ಇಟ್ಟ ಕಾರಣ ಕ್ಷೇತ್ರದ ವತಿಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಭಕ್ತರೇ ನವರಾತ್ರಿ ಉತ್ಸವದ ಸೇವೆಯ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಬಗೆಗಿರುವ ಅವರ ಬತ್ತಿಯನ್ನು ತೋರ್ಪಡಿಸುತ್ತದೆ ಎಂದು ಹೇಳಿದ್ದಾರೆ.
ದೇಯಿ ಬೈದೆತಿ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಭಕ್ತರನ್ನು ತನ್ನಡೆಗೆ ಸೆಳೆದು ತುಳುನಾಡಿನ ಪ್ರಮುಖ ಧಾರ್ಮಿಕ ಸ್ಥಳವಾಗಿ ಬೆಳೆದು ಬಂದಿದೆ.