ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ್ದ ಬಗ್ಗೆ ತಿಳಿದ ಕಳ್ಳರ ತಂಡವೊಂದು ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ, ಮನೆಯ ಗೋದ್ರೆಜ್ ಲಾಕರ್ ಒಡೆದು ನಗದು ಹಾಗೂ 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆಯಲ್ಲಿ ನಡೆದಿದೆ.
ಕೃಷಿ ಹಾಗೂ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದ ದೇರಾಜೆ ನಿವಾಸಿ ಮಹಮ್ಮದ್ (43 )ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ.
ಅ.31 ರಂದು ಮಹಮ್ಮದ್ ರವರು, ಅವರ ಪತ್ನಿ ಮತ್ತು ಮೂವರು ಮಕ್ಕಳು ಸಹಿತ ನಿಶ್ಚಿತಾರ್ಥ ಕಾರ್ಯಕ್ರಮವೊಂದಕ್ಕೆ ಬಂಟ್ವಾಳಕ್ಕೆ ಹೋಗಿದ್ದು, ಮಹಮ್ಮದ್ ಸಮೀಪದ ಅಡಿಕೆ ತೋಟಕ್ಕೆ ಹೋಗಿದ್ದರು. ನಿಶ್ಚಿತಾರ್ಥ ಮುಗಿಸಿಕೊಂಡು ಪತ್ನಿ ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
5200 ರೂ. ನಗದು, ನೆಕ್ಲೇಸ್ ಚೈನ್, ಚಿನ್ನದ ಬಿಸ್ಕೆಟ್, ಬಳೆ, ಮಕ್ಕಳ ಅಭರಣ ಸಹಿತ ಒಟ್ಟಾರೆ ರೂ. 12,05,200 ಮೌಲ್ಯದ 40 ಪವನ್ ಚಿನ್ನಾಭರಣ ಕಳ್ಳತನವಾಗಿದೆ. ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.