ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಮಾಣಿ ಸಮೀಪದ ಹಲೀರ ಎಂಬಲ್ಲಿ ಎರಡು ದಿನಗಳ ಹಿಂದೆ ಇನ್ನೋವಾ ಕಾರು ಮತ್ತು ಸ್ವಿಫ್ಟ್ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆಯಲ್ಲಿ ಇನ್ನೋವಾ ಕಾರಿನಲ್ಲಿದ್ದ ಯುವಕನ ಮೇಲೆ ಸ್ಥಳೀಯ ಕಿಡಿಗೇಡಿಗಳು ಪೋಲಿಸರ ಸಮ್ಮುಖದಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು, ಇದರ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಲಾಟೆಯಾಗುವ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ ಹನೀಫ್ ಎಂಬವರು ಎರಡು ಕಡೆಯವರನ್ನು ಸಮಾಧಾನ ಪಡಿಸಿ ಗಲಾಟೆ ನಿಲ್ಲಿಸಿ ಶಾಂತಿಯಾಗಿಸಲು ಪ್ರಯತ್ನಪಟ್ಟಿದ್ದರು, ಇದು ವೈರಲ್ ಆದ ವೀಡಿಯೋದಲ್ಲಿ ಕೂಡ ಸ್ಪಷ್ಟವಾಗಿ ಗೋಚರಿಸುತ್ತದೆ.
ಆದರೆ ಘಟನೆ ನಡೆದು ಎರಡು ದಿನಗಳಾದರು ಪೋಲಿಸರು ನೈಜ ಆರೋಪಿಗಳು ರಾಜಾರೋಶವಾಗಿ ತಿರುಗಾಡುತ್ತಿದ್ದರು ಅವರನ್ನು ಬಂಧಿಸದೆ ಗಲಭೆಯನ್ನು ನಿಯಂತ್ರಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನ ಮೇಲೆಯೆ ಸ್ವಯಂ ಪ್ರೇರಿತ ಕೇಸ್ ದಾಖಲು ಮಾಡಿ ಬಂಧಿಸಿರುವ ಕ್ರಮವನ್ನು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಖಂಡಿಸಿದ್ದಾರೆ.
ಅಮಾಯಕ ನಿರಪರಾಧಿಯಾದ ಕಾಂಗ್ರೆಸ್ ಕಾರ್ಯಕರ್ತನನ್ನು ಕೂಡಲೇ ಬಿಡುಗಡೆಗೊಳಿಸಿ, ವೀಡಿಯೋ ಸಾಕ್ಷಿ ಸಹಿತ ಇರುವ ನೈಜ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುದೀಪ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.