ಬಂಟ್ವಾಳ: ತಾಲೂಕಿನ ಸಜೀಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ಐವರು ಬಾಲಕರ ತಂಡ ಈಜಲು ಹೋಗಿದ್ದು, ಇದರಲ್ಲಿ ಓರ್ವ ಯುವಕ ನೀರು ಪಾಲಾದರೆ ಇನ್ನುಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಓರ್ವ ಬಾಲಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಯಾವುದೇ ಅಪಾಯವಿಲ್ಲ ಎನ್ನಲಾಗಿದೆ.
ತಲೆಮೊಗರು ನಿವಾಸಿ ರುಕ್ಮಯ ಅವರ ಮಗ ಅಶ್ವಿಥ್ (19) ನೀರು ಪಾಲಾದ ಯುವಕ.
ಹರ್ಷಿತ್ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ ಸ್ನೇಹಿತ ರಾದ ಲಿಖಿತ್, ವಿಕೇಶ್, ವಿಶಾಲ್ ಅವರನ್ನು ರಕ್ಷಣೆ ಮಾಡಲಾಗಿದೆ.
ಸ್ನೇಹಿತರಾದ ಐವರು ಸಂಜೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಮಿತಿಮೀರಿ ಹರಿಯುತ್ತಿದ್ದು, ಈ ವೇಳೆ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಭೇಟಿ ನೀಡಿದ್ದು, ನೀರು ಪಾಲಾದ ಅಶ್ವಿಥ್ ನ ಪತ್ತೆಗಾಗಿ ಸ್ಥಳೀಯ ಮುಳುಗು ತಜ್ಞರ ಸಹಾಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.