ಬೆಂಗಳೂರು: ಹಿಂದೂ ಸಮಾಜೋತ್ಸವ, ಜನಜಾಗೃತಿ ಸಮಾವೇಶ ಮತ್ತು ಲವ್ ಜಿಹಾದ್ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಕೋಮುದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಜಗದೀಶ ಕಾರಂತ್ ಹಾಗೂ ಕೆಲವು ಹಿಂದುತ್ವ ಸಂಘಟನೆಗಳ ಪ್ರಮುಖರ ವಿರುದ್ಧ ದಾಖಲಾಗಿದ್ದ ಒಟ್ಟು 34 ಮೊಕದ್ದಮೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮತ್ತು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಈ ಮೊಕದ್ದಮೆಗಳನ್ನು ಹಿಂಪಡೆಯಬಾರದು ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿ, ಐಜಿಪಿ) ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆ ಮತ್ತು ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದವು. ಆದರೂ ಸಚಿವ ಸಂಪುಟ ಸಭೆಯಲ್ಲಿ ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಈ ಪೈಕಿ, ರೈತರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಿವೆ.
ಈ ಕುರಿತಂತೆ ಸೆ.19 ರಂದು ನಡೆದ ಸಚಿವ ಸಂಪುಟ ಸಭೆಗೆ ಒಳಾಡಳಿತ ಇಲಾಖೆ ಮಂಡಿಸಿದ್ದ 47 ಪುಟಗಳ ಕಡತ ಲಭ್ಯವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಸಚಿವರು, ಶಾಸಕರು ಮೊಕದ್ದಮೆಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದರು.
ಆಗಸ್ಟ್ 2 ರಂದು ನಡೆದ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಮೊಕದ್ದಮೆಗಳನ್ನು ಹಿಂಪಡೆಯುವ ಕುರಿತಂತೆ 46 ಮೊಕದ್ದಮೆಗಳನ್ನು ಒಳಗೊಂಡ 27 ಕಡತಗಳನ್ನು ಪರಿಶೀಲಿಸಲಾಗಿತ್ತು. ಈ ಯಾವುದೇ ಮೊಕದ್ದಮೆಗಳು ಹಿಂಪಡೆಯಲು ಸೂಕ್ತ ಅಲ್ಲ ಎಂದು ಪೊಲೀಸ್ ಇಲಾಖೆ, ಅಭಿಯೋಗ ಇಲಾಖೆ ಹಾಗೂ ಕಾನೂನು ಇಲಾಖೆ ಅಭಿಪ್ರಾಯ ನೀಡಿದ್ದವು. ಆದರೆ, ಸಿಆರ್ಪಿಸಿ 321ರ ಅಡಿಯಲ್ಲಿ
(ನ್ಯಾಯಾಲಯದಲ್ಲಿರುವ ಮೊಕದ್ದಮೆಗಳನ್ನು ಹಿಂಪಡೆಯುವ ಅಧಿಕಾರ ಅಭಿಯೋಜಕರಿಗೆ ಮಾತ್ರ) 34 ಮೊಕದ್ದಮೆಗಳನ್ನು ಹಿಂಪಡೆಯುವುದು ಸೂಕ್ತ ಎಂದು ಸಂಪುಟ ಸಭೆಗೆ ಉಪ ಸಮಿತಿ ಶಿಫಾರಸು ಮಾಡಿತ್ತು.
ಕೆಲವು ಮೊಕದ್ದಮೆಗಳು:
ಹಿಂದೂ-ಮುಸ್ಲಿಂ ಗಲಭೆ ಉಂಟು ಮಾಡಲು ಮೆರವಣಿಗೆ ನೆಪದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಲ್ಲಿ ಮಡಿಕೇರಿ ಪೊಲೀಸ್ ಠಾಣೆಯಲ್ಲಿ 2015ರಲ್ಲಿ ದಾಖಲಾಗಿದ್ದ ಮೊಕದ್ದಮೆಯನ್ನು ವಾಪಸು ಪಡೆಯುವಂತೆ ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದ್ದರು.
ರಾಷ್ಟ್ರೀಯ ಹೆದ್ದಾರಿ 4ನ್ನು ಬಂದ್ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯಲ್ಲಿ ಹಾವೇರಿಯ ಕುಮಾರಪಟ್ಟಣಂ ಠಾಣೆಯಲ್ಲಿ 2018ರಲ್ಲಿ ರೈತರ ಮೇಲೆ ದಾಖಲಾದ ಪ್ರಕರಣವನ್ನೂ ವಾಪಸು ಪಡೆಯಲು ಮುಖ್ಯಮಂತ್ರಿ ಮತ್ತು ರೈತ ಸಂಘದವರು ಮನವಿ ಸಲ್ಲಿಸಿದ್ದರು.
ಹಲಗೇರಿ ಠಾಣೆಯಲ್ಲಿ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದಾಂಧಲೆ ನಡೆಸಿದ ಘಟನೆ ಸಂಬಂಧಿಸಿದಂತೆ 2016ರಲ್ಲಿ ಹಾಗೂ ಹೊಲಗಳಿಗೆ ನೀರು ನುಗ್ಗಿದೆ ಎಂದು ಆರೋಪಿಸಿ ರಸ್ತೆ ಅಡ್ಡಗಟ್ಟಿದ ರೈತರ ಮೇಲೆ 2018ರಲ್ಲಿ ದಾಖಲಾದ ಮೊಕದ್ದಮೆಗಳನ್ನು ವಾಪಸು ಪಡೆಯಲು ಸ್ಥಳೀಯ ಶಾಸಕ ಅರುಣ್ ಕುಮಾರ್ ಆಗ್ರಹಿಸಿದ್ದರು.
ಹಿಂದಕ್ಕೆ ಪಡೆದ ಪ್ರಮುಖ ಮೊಕದ್ದಮೆಗಳು
- ಹಾವೇರಿಯಲ್ಲಿ ಹಲಗೇರಿ ಠಾಣೆಯಲ್ಲಿ 2015ರಲ್ಲಿ ಎರಡು ಕೋಮುಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದವರ ಮೇಲಿನ ಮೊಕದ್ದಮೆ- ಗೃಹ ಸಚಿವ ಜ್ಞಾನೇಂದ್ರ ಮನವಿ
- ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಿದ ಆರೋಪದಲ್ಲಿ 2017ರಲ್ಲಿ ಮೈಸೂರು ಜಿಲ್ಲೆಯ ಇಲವಾಲ ಠಾಣೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮೇಲೆ ದಾಖಲಾದ ಮೊಕದ್ದಮೆ-ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ
- ಹಿಂದೂ ಜಾಗರಣ ವೇದಿಕೆಯ ಶಿವಾನಂದ ಮಲ್ಲಪ್ಪ ಬಡಿಗೇರ ಮತ್ತು ಇತರ ಎಂಟು ಮಂದಿಯ ಗಡಿಪಾರು ವಿರೋಧಿಸಿ ಮುಧೋಳ ಚಲೋ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಜಗದೀಶ ಕಾರಂತ್ ಮತ್ತು ಸ್ಥಳೀಯ ಕಾರ್ಯಕರ್ತನ ವಿರುದ್ಧ ಮುಧೋಳ ಠಾಣೆಯಲ್ಲಿ 2017ರಲ್ಲಿ ದಾಖಲಾದ ಮೊಕದ್ದಮೆ– ಸಚಿವ ಎಸ್. ಅಂಗಾರ ಮನವಿ
- ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿಯಲ್ಲಿ ಹಿಂದೂ ಸಮಾಜೋತ್ಸವದಲ್ಲಿ ಕೋಮು ದ್ವೇಷದ ಭಾಷಣ ಮಾಡಿದ ಆರೋಪದಲ್ಲಿ ಸುಳ್ಯ ಠಾಣೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಡಿ.ವಿ. ಲೀಲಾಧರ, ಸುಬ್ರಹ್ಮಣ್ಯ ಉಪಾಧ್ಯಾಯ, ಕೆ.ಪಿ. ಜಗದೀಶ ಮತ್ತು ಜಗದೀಶ ಕಾರಂತ್ ವಿರುದ್ಧ 2013ರಲ್ಲಿ ದಾಖಲಾದ ಮೊಕದ್ದಮೆ- ಸಚಿವ ಎಸ್. ಅಂಗಾರ ಮನವಿ
- ದೊಡ್ಡಬಳ್ಳಾಪುರದಲ್ಲಿ ಲವ್ ಜಿಹಾದ್ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರನ್ನು ನಿಂದಿಸಿದ ಆರೋಪದಡಿ ಜಗದೀಶ ಕಾರಂತ್ ವಿರುದ್ಧ 2011ರಲ್ಲಿ ದಾಖಲಾದ ಮೊಕದ್ದಮೆ- ಸಚಿವ ಎಸ್. ಅಂಗಾರ ಮನವಿ
- ಶಿರಾದಲ್ಲಿ ಹಿಂದೂ ಜನ ಜಾಗೃತಿ ಸಮಾವೇಶದಲ್ಲಿ ದ್ವೇಷ ವೈಷಮ್ಯದ ಭಾಷಣ ಮಾಡಿದ ಆರೋಪದಲ್ಲಿ 2009ರಲ್ಲಿ ಜಗದೀಶ ಕಾರಂತ್ ವಿರುದ್ಧ ದಾಖಲಾದ ಮೊಕದ್ದಮೆ- ಸಚಿವ ಎಸ್. ಅಂಗಾರ ಮನವಿ