ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್ ಸಮೀಪದ ಏಳೂವರೆ ಹಳ್ಳದ ಕಲ್ಲಂಡ ಎಂಬಲ್ಲಿ ಸ್ನಾನಕ್ಕೆ ಇಳಿದಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಎಂಬವರ ಪುತ್ರ, ಉಜಿರೆಯ ಖಾಸಗಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿವೇಕ್ (17) ಎಂದು ಗುರುತಿಸಲಾಗಿದೆ.
ವಿವೇಕ್ ಶನಿವಾರ ಮಧ್ಯಾಹ್ನ ನಂತರ ಕಾಲೇಜಿಗೆ ರಜೆ ಇದ್ದುದರಿಂದ ತನ್ನ ಆರೇಳು ಮಂದಿ ಸ್ನೇಹಿತರ ಜೊತೆ ಎರ್ಮಾಯಿ ಫಾಲ್ಸ್ ಗೆ ಹೋಗಿ, ತೊಟ್ಲಾಯಿ ಗುಂಡಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಸಮಯ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸ್ನಾನಕ್ಕೆ ಇಳಿದಿದ್ದ ಈತ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಸಿಲುಕಿ ಆಳವಾದ ಹೊಂಡದಲ್ಲಿ ಸಿಲುಕಿದ್ದಾನೆ. ಅವರೊಂದಿಗಿದ್ದವರು ಬೊಬ್ಬೊ ಹೊಡದು ಸಹಾಯಕ್ಕಾಗಿ ಯಾಚಿಸಿದ್ದು, ಸ್ಥಳೀಯರು ಸ್ಥಳಕ್ಕೆ ಆಗಮಿಸಿ ನೀರಿಗೆ ಇಳಿದು ಆತನ್ನು ನೀರಿನಿಂದ ಮೇಲೆತ್ತಿದರು. ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತಂದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎನ್ನಲಾಗಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ..