ಹಾಸನ: ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾದಾಡಿ ಪ್ರಾಣ ಬಿಟ್ಟ ಅರ್ಜುನನ ಅಂತ್ಯಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಹಾಸನ ಜಿಲ್ಲಾಡಳಿತವು ಅರ್ಜುನ ಮೃತಪಟ್ಟ ಸಕಲೇಶಪುರ ತಾಲ್ಲೂಕು ದಬ್ಬಳ್ಳಿಕಟ್ಟೆ ಅರಣ್ಯದಲ್ಲೇ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಿತ್ತು. ಮಾವುತರು, ಸ್ಥಳೀಯರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನನ್ನು ಮೈಸೂರಿಗೆ ಕರೆದುಕೊಂಡು ಹೋಗಬೇಕು. ಅಥವಾ ಸಕಲೇಶಪುರದ ಒಂದು ಜಾಗಕ್ಕೆ ತೆಗೆದುಕೊಂಡು ಹೋಗಬೇಕು. ಆ ಜಾಗದಲ್ಲಿ ಅಂತ್ಯಕ್ರಿಯೆ ಮಾಡಿದ ಬಳಿಕ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮಾವುತರು, ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಹೀಗೆ ಘೋಷಣೆ ಕೂಗಿದ ಜನರು ಅರಣ್ಯ ಇಲಾಖೆ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರ್ಜುನನ ಅಂತ್ಯಕ್ರಿಯೆ ವೇಳೆ ನೆರೆದಿದ್ದ ಜನರು ಆನೆಯ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಿದರು. ಅಲ್ಲಿವರೆಗೂ ಅಂತ್ಯಕ್ರಿಯೆ ನಡೆಸದಂತೆ ಪ್ರತಿಭಟನೆ ನಡೆಸಿದರು. ಈ ವೇಳೆ ಹೋರಾಟಗಾರರನ್ನು ಚದುರಿಸಿದ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಲಾಠಿ ಬೀಸುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಲಘು ಲಾಠಿ ಪ್ರಹಾರ ಮಾಡಿ ಜನರನ್ನು ನಿಯಂತ್ರಿಸಿರುವ ಪೊಲೀಸರು ಅರ್ಜುನನ ಅಂತ್ಯಸಂಸ್ಕಾರ ಮಾಡಿದ್ದಾರೆ.
ಅರ್ಜುನ ಇನ್ನು ನೆನಪು ಮಾತ್ರ
ಮಾವುತರ ಕಣ್ಣೀರು, ಅಭಿಮಾನಿಗಳ ಆಕ್ರೋಶದ ಮಧ್ಯೆ ಅಂಬಾರಿ ಹೊತ್ತಿದ್ದ ಅರ್ಜುನನ ಅಂತ್ಯಕ್ರಿಯೆ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅರ್ಜುನನಿಗೆ ಸಕಲ ಸರ್ಕಾರಿ ಗೌರವ ಸಮರ್ಪಣೆ ಮಾಡಲಾಗಿದೆ. ಅರ್ಜುನನ ಅಂತ್ಯಕ್ರಿಯೆಗೆ 15 ಅಡಿಗೂ ಹೆಚ್ಚು ಆಳದ ಗುಂಡಿ ತೆಗೆದು ಸಮಾಧಿ ಮಾಡಲಾಗಿದೆ. ಕೊನೆ ಕ್ಷಣದಲ್ಲೂ ಅರ್ಜುನನ ಅಂತಿಮ ದರ್ಶನಕ್ಕೆ ನೂರಾರು ಜನರು ಕಾದು ನಿಂತಿದ್ದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಅರ್ಜುನನ ಎರಡೂ ದಂತವನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರ ನೆರವಿನೊಂದಿಗೆ ದಂತ ತೆರವು ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದಾರೆ.