ಮಂಗಳೂರು : ಸಾರ್ವಜನಿಕರಿಗೆ ತೊಂದರೆಯಾಗುವಂತೆ ರಸ್ತೆಗಳಲ್ಲಿ ನಮಾಜ್ ಮಾಡುವುದು, ಇಫ್ತಾರ್ ಕೂಟ ಆಯೋಜನೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಹದ್ದೇ ಘಟನೆ ನಡೆದಿದೆ.
ಉಳ್ಳಾಲ ತಾಲೂಕಿನ ಮುಡಿಪು ಎಂಬಲ್ಲಿ ಸೌಹಾರ್ದ ಹೆಸರಿನಲ್ಲಿ ಒಂದು ಬದಿಯ ರಸ್ತೆಯನ್ನು ತಡೆದು ಇಫ್ತಾರ್ ಕೂಟ ನಡೆಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವೀಡಿಯೋ ವೈರಲ್ ಆಗುತ್ತಿದೆ.
![](https://zoomintv.online/wp-content/uploads/2024/03/iftar-gathering-in-the-middle-of-road-at-mudipu-1024x576.jpg)
ಉಳ್ಳಾಲ ತಾಲೂಕಿನ ಮುಡಿಪು ಜಂಕ್ಷನ್ನಲ್ಲಿ ಆಟೋ ರಾಜಕನ್ಮಾರ್ ಸಂಘಟನೆಯಿಂದ ಇಫ್ತಾರ್ ಕೂಟ ನಡೆಸಲಾಗಿದೆ. ರಿಕ್ಷಾ ಚಾಲಕರೆಲ್ಲರೂ ಒಟ್ಟಾಗಿ ಸೇರಿಕೊಂಡು ನಡೆಸಿದ ಈ ಇಫ್ತಾರ್ ಕೂಟದಲ್ಲಿ ರಿಕ್ಷಾ ಚಾಲಕರು, ವರ್ತಕರು, ಸ್ಥಳೀಯರು ಭಾಗಿಯಾಗಿದ್ದಾರೆ.
ಒಂದು ಭಾಗದ ರಸ್ತೆ ಮಧ್ಯೆ ಟೇಬಲ್, ಚಯರ್ ಇಟ್ಟು ಸಹಭೋಜನ ಮಾಡಲಾಗಿದೆ. ಇದರ ವೀಡಿಯೋವನ್ನು Frontalforce ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆ ಇಫ್ತಾರ್ ಕಾರ್ಯಕ್ರಮವನ್ನು ಸಭಾಂಗಣವೊಂದರಲ್ಲಿ ಆಯೋಜಿಸಲಾಗಿತ್ತು. ಆದರೆ ಹಿಂದೂಗಳಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ ಮುಡಿಪು ಜಂಕ್ಷನ್ಗೆ ಈ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.