ಬೆಟ್ಟಂಪ್ಪಾಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ವಿದ್ಯಾರ್ಥಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು, ಯುವ ಸ್ಪಂದನ ಕೇಂದ್ರ ಮಂಗಳೂರು ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಒತ್ತಡ ನಿರ್ವಹಣೆ-ಆನ್ಲೈನ್ ಕಾರ್ಯಾಗಾರವು ಮೇ.30 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಇಲ್ಲಿನ ಜೀವನ ಕೌಶಲ ತರಬೇತುದಾರರಾದ ಶ್ರೀಕಾಂತ್ ಪೂಜಾರಿ ಬಿರಾವು ಇವರು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬಲಿಯಾಗದೆ ಕುಟುಂಬದವರ ಜೊತೆ ಸಮಯವನ್ನು ಕಳೆಯಬೇಕು, ಪ್ರತಿಯೊಬ್ಬರೂ ಅವರವರ ಕೆಲಸದಿಂದಾಗಿ ಒತ್ತಡಕ್ಕೆ ಒಳಗಾಗುವರು ಆದರೆ ಆ ಒತ್ತಡವನ್ನು ನಿರ್ವಹಣೆ ಮಾಡುವ ಶಕ್ತಿ ನಮ್ಮಲ್ಲಿದೆ ಅದನ್ನು ಹೇಗೆ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ನಿಮ್ಹಾನ್ಸ್ ಬೆಂಗಳೂರು ಇಲ್ಲಿನ ಕ್ಷೇತ್ರ ಸಂಪರ್ಕ ಅಧಿಕಾರಿಗಳಾದ ದಿವಾಕರ್ ಅವರು ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿ ಯೋಗ ಧ್ಯಾನಗಳ ಮೂಲಕ ಒತ್ತಡ ನಿರ್ವಹಣೆ ಮಾಡಿಕೊಂಡು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪುತ್ತೂರು ತಾಲೂಕು ಇಲ್ಲಿನ ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾ ಅಧಿಕಾರಿಗಳಾದ ರಾಮಕೃಷ್ಣ ಪಡುಮಲೆ ಇವರು ಮಾತನಾಡುತ್ತಾ ಆಧುನಿಕ ಜೀವನ ಶೈಲಿಯೇ ಒತ್ತಡಕ್ಕೆ ಕಾರಣವಾಗಿದೆ, ಮನಸ್ಸನ್ನು ನಿಯಂತ್ರಿಸುವ ಮೂಲಕ ಆಧುನಿಕ ಜೀವನಕ್ಕೆ ಒಗ್ಗಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಪರಿಪೂರ್ಣವಾಗಿ ಆರೋಗ್ಯವಂತ ಮನುಷ್ಯ ಎನ್ನಿಸಿಕೊಳ್ಳಬೇಕಾದರೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸಶಕ್ತರಾಗಿರಬೇಕು, ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಕರೆ ನೀಡಿದರು.
ಗೂಗಲ್ ಮೀಟ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಮತ್ತು ಎನ್ನೆಸ್ಸೆಸ್ ಅಧಿಕಾರಿಗಳಾಗಿರುವ ಹರಿಪ್ರಸಾದ್ ಎಸ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ದಾಮೋದರ ಗೌಡ ಕಣಜಾಲು, ಉಪನ್ಯಾಸಕರಾದ ಡಾ. ಪ್ರಮೋದ್ ಎಮ್ ಜಿ, ವೆಂಕಟಕೃಷ್ಣ ಭಾಗವತ ಅವರು ಉಪಸ್ಥಿತರಿದ್ದರು.
ಎನ್ಎಸ್ಎಸ್ ಸ್ವಯಂ ಸೇವಕರಾದ ಶಿಲ್ಪಾ ಎನ್ ಮತ್ತು ಶೈಲಜಾ ಎನ್ ಪ್ರಾರ್ಥನೆ ಹಾಡಿದರು, ಘಟಕ ನಾಯಕಿ ರಂಜಿತಾ ಜಿ ಸ್ವಾಗತಿಸಿದರು, ನವನೀತಾ ಕೆ ವಂದಿಸಿದರು ಹಾಗೂ ಸಾರ್ಥಕ್ ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು.